Home Advertisement
Home ಸುದ್ದಿ ದೇಶ ಭಾರತ ಸ್ವಾಭಿಮಾನದ ಪ್ರತೀಕ ಸೋಮನಾಥ ದೇವಾಲಯ

ಭಾರತ ಸ್ವಾಭಿಮಾನದ ಪ್ರತೀಕ ಸೋಮನಾಥ ದೇವಾಲಯ

0
77

ಗುಜರಾತ್‌ನಲ್ಲಿರುವ ಸೋಮನಾಥ ದೇವಸ್ಥಾನ ಪವಿತ್ರ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಚಂದ್ರ ಇಲ್ಲಿ ಶಿವನನ್ನು ಪೂಜಿಸಿ, ದಕ್ಷ ಪ್ರಜಾಪತಿ ನೀಡಿದ್ದ ಶಾಪದಿಂದ ವಿಮೋಚನೆ ಪಡೆದಿದ್ದರಿಂದ ಸೋಮನಾಥ ಎನ್ನುವ ಹೆಸರು ಬಂದಿದೆ. ಇದು ಹಲವು ಬಾರಿ ವಿದೇಶಿಯರಿಂದ ದಾಳಿಗೆ ಒಳಗಾಗಿದ್ದರೂ, ಇಂದು ಭವ್ಯವಾಗಿ ತಲೆ ಎತ್ತಿ ನಿಂತಿದೆ. ಹೀಗಾಗಿ ಸ್ವಾಭಿಮಾನದ ಸಂಕೇತ ಎನ್ನಿಸಿಕೊಂಡಿದೆ. ಸ್ವಾತಂತ್ರ್ಯ ಬಂದಾಗ ಅವಶೇಷಗಳು ಉಳಿದುಕೊಂಡಿದ್ದವು. ಅಂದಿನ ಗೃಹ ಸಚಿವ ಸರ್ದಾರ್ ಪಟೇಲರು ಆಸಕ್ತಿ ವಹಿಸಿದ್ದರಿಂದ ಮಂದಿರ ಪುನರ್ನಿಮಾಣಗೊಂಡಿತು. ಈ ದೇವಸ್ಥಾನದ ಮೇಲೆ ಮೊದಲ ದಾಳಿ ನಡೆದಿದ್ದು ಘಜ್ನಿ ಮೊಹಮ್ಮದ್‌ನಿಂದ, 1026ರಲ್ಲಿ. ಸ್ವತಂತ್ರ ಭಾರತದಲ್ಲಿ ಆ ದೇವಸ್ಥಾನವನ್ನು ಪುನರ್ನಿಮಾಣ ಮಾಡಿದ್ದು 1951ರಲ್ಲಿ. ಈಗ ದೇವಸ್ಥಾನ ಮರುನಿರ್ಮಾಣಗೊಂಡು 75 ವರ್ಷ ಕಳೆದಿದೆ. ಅತ್ಯಂತ ವ್ಯವಸ್ಥಿತವಾಗಿ ನಿರ್ವಹಣೆಗೊಳ್ಳುತ್ತಿರುವ ದೇವಸ್ಥಾನ ಎಂದೂ ಖ್ಯಾತಿ ಪಡೆದಿದೆ. ಇಲ್ಲಿದೆ ದೇವಸ್ಥಾನದ ಏಳು ಬೀಳುಗಳ ದಾರಿಯಲ್ಲಿ ಒಂದು ಪಯಣ.

ಘಜ್ನಿ ದಂಡಯಾತ್ರೆಯಲ್ಲಿ ದೇವಸ್ಥಾನ ವಿನಾಶ, ಲೂಟಿ: ಅಫ್ಘಾನಿಸ್ತಾನದ ಘಜನಿಯಿಂದ ಘಜ್ನಿ ಮೊಹಮ್ಮದ್ 1025ರ ಅಕ್ಟೋಬರ್ 18ರಂದು 30,000 ಕುದುರೆ ಸವಾರರೊಂದಿಗೆ ಭಾರತದ ಕಡೆಗೆ ದಂಡೆತ್ತಿ ಬಂದ. ಡಿಸೆಂಬರ್ 1025ರ ಹೊತ್ತಿಗೆ ಗುಜರಾತ್ ಗಡಿ ತಲುಪಿಕೊಂಡ. 1026ರ ಜನವರಿ 6-8ರವರೆಗೆ ದೇವಸ್ಥಾನಗಳನ್ನು ಧ್ವಂಸ ಮಾಡತೊಡಗಿದೆ. ಸೋಮನಾಥ ದೇವಸ್ಥಾನ ಬಲವಾದ ಕೋಟೆಯೊಳಗಿತ್ತು. ಸಾವಿರಾರು ಭಕ್ತರು ಅದನ್ನು ಕಾಪಾಡಲು ನಿಂತರು. ಮೂರು ದಿನಗಳ ಕಾಲ ಹೋರಾಟದಲ್ಲಿ ಘಜ್ನಿ ಗೆದ್ದು, ಶಿವಲಿಂಗವನ್ನು ಧ್ವಂಸ ಮಾಡಿದ್ದ. ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳು ದೋಚಿದ. ಚರಿತ್ರಕಾರ ಮಿನ್ಹಾಜ್ ಅಸ್ ಶಿರಾಜ್ ಬರೆದಿರುವ ತಬಾಖತ್ ಇ ನಾಸಿರಿ ಪುಸ್ತಕದಲ್ಲಿ ಹೇಳಿರುವಂತೆ ಘಜ್ನಿ ಸೋಮನಾಥ ದೇವಸ್ಥಾನದ ಮೂರ್ತಿಗಳೂ ಸೇರಿ ಆತ ಹೊತ್ತೊಯ್ದ ಚಿನ್ನದ ಪ್ರಮಾಣ 6 ಟನ್.

ಭೀಮದೇವ, ಕುಮರಪಾಲ ಅವರಿಂದ ಮರುನಿರ್ಮಾಣ: ಈಗಿನ ರಾಜಸ್ಥಾನ-ಗುಜರಾತ್‌ನ ಪ್ರದೇಶಗಳನ್ನು ಆಳುತ್ತಿದ್ದ ರಾಜ ಒಂದನೇ ಭೀಮದೇವ 1026ರಿಂದ 1042ರ ಅವಧಿಯಲ್ಲಿ ಈ ದೇವಸ್ಥಾನವನ್ನು ಮರು ನಿರ್ಮಾಣ ಮಾಡಿದ. 1169ರ ಶಾಸನದ ಪ್ರಕಾರ ಇದನ್ನು ಚೌಲುಕ್ಯ-ಸೋಳಂಕಿ ರಾಜಮನೆತನದ ರಾಜ ಕುಮರಪಾಲ ಇದನ್ನು ಮರುನಿರ್ಮಾಣ ಮಾಡಿ ಮಣಿಗಳಿಂದ ಅಲಂಕರಿಸಿದನು.

ಖಿಲ್ಜಿಯೂ ಬಿಡಲಿಲ್ಲ: 1299ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಗುಜರಾತ್ ಮೇಲೆ ಆಕ್ರಮಣ ನಡೆಸಿದ್ದ . ಅವನ ನೇನಾಪತಿ ಉಲೂಗ್ ಖಾನ್ ನೇತೃತ್ವದಲ್ಲಿ ವಾಘೇಲಾ ರಾಜ ಕರ್ಣನ ಸೋಲಿಸಿದ ನಂತರ ಸೋಮನಾಥ ಮಂದಿರವನ್ನು ಲೂಟಿ ಮಾಡಿದ

ಭಾರತದ ಮುಸ್ಲಿಮ್ ದೊರೆಯಿಂದಲೂ ಲೂಟಿ: 14ನೇ ಶತಮಾನದಲ್ಲಿ ಭಾರತದ ಮುಸ್ಲಿಂ ದೊರೆಗಳಿಂದಲೇ ಸೋಮನಾಥ ಲೂಟಿಗೊಳಗಾಯಿತು. ದೆಹಲಿ ಸುಲ್ತಾನರ ಗುಜರಾತ್ ಗವರ್ನರ್ ಆಗಿದ್ದ ಜಾಫರ್ 1395ರಲ್ಲಿ ದೇವಸ್ಥಾನವನ್ನು ಲೂಟಿ ಮಾಡಿದ. ನಂತರ ಗುಜರಾತ್ ಸುಲ್ತಾನೇಟ್‌ನ ಪ್ರಭಾವಿ ದೊರೆ ಮೊಹಮ್ಮದ್ ಬೆಗಡಾ ದೇವಸ್ಥಾನವನ್ನು ನಾಶಗೊಳಿಸಿ, ಲೂಟಿ ಮಾಡಿದ.

ಔರಂಗಜೇಬನ ಕಾಲದಲ್ಲಿಯೇ ನಿರ್ಮಾಣಗೊಂಡಿದ್ದ ಮಸೀದಿ: 1665ರಲ್ಲಿ ಮೊಘಲ್ ದೊರೆ ಔರಂಗಜೇಬ ದೇವಸ್ಥಾನವನ್ನು ನಾಶಪಡಿಸಿ ಮಸೀದಿ ನಿರ್ಮಿಸುವಂತೆ ಆದೇಶ ನೀಡಿದ. 1706ರಲ್ಲಿ ಔರಂಗಜೇಬ ದೇವಸ್ಥಾನದ ಮೇಲೆ ಮತ್ತೆ ದಾಳಿ ನಡೆಸಿದ. ಆದರೆ ಇತಿಹಾಸಕಾರ ಆರ್.ಸಿ. ಮಜುಂದಾರ್ ಪ್ರಕಾರ ಔರಂಗಜೇಬ ಅಲ್ಲಿ ಪೂಜೆ ಮಾಡುವುದನ್ನು ನಿಲ್ಲಿಸಿದ್ದಲ್ಲದೆ, ಅದೇ ಕಾಂಪ್ಲೆಕ್ಸ್‌ನಲ್ಲಿ ಮಸೀದಿ ಕಟ್ಟಿಸಿದ. ಮತ್ತೊಬ್ಬ ಇತಿಹಾಸಕಾರ ಸತೀಶ್ ಚಂದ್ರ ಹೇಳುವಂತೆ, ಅದೇ ಕಾಂಪ್ಲೆಕ್ಸ್‌ನಲ್ಲಿ ಮಸೀದಿ ಕಟ್ಟಿಸಿದನೋ ಅಥವಾ ಹತ್ತಿರದಲ್ಲೇ ಮಸೀದಿ ಕಟ್ಟಿಸಿದನೋ ಸ್ಪಷ್ಟವಾಗಿಲ್ಲ. ರೊಮಿಲಾ ಥಾಪರ್ ಹೇಳುವಂತೆ ಧ್ವಂಸಗೊಂಡ ದೇವಸ್ಥಾನದ ಬಳಿಯೇ ಮಸೀದಿ ನಿರ್ಮಿಸಿದ.

ಮಂದಿರ ನಿರ್ಮಾಣವಾಗಿದ್ದು ಜನರ ದುಡ್ಡಿನಿಂದಲೇ, ಸರ್ಕಾರಕ್ಕೆ ಖರ್ಚಿಲ್ಲ: ಭಾರತಕ್ಕೆ ಸ್ವಾತಂತ್ರö್ಯ ಬಂದ ಮೂರೇ ತಿಂಗಳಲ್ಲಿ ಆಗಿನ ಉಪಪ್ರಧಾನಿ ಮತ್ತು ಗೃಹಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಸೋಮನಾಥದಲ್ಲಿ ಭವ್ಯ ಮಂದಿರ ನಿರ್ಮಿಸುವಂತೆ ಆದೇಶಿಸಿದರು. 1950ರಲ್ಲಿ ಪಟೇಲರು ನಿಧನರಾದರು. ಅವರ ನಂತರ ಜವಾಬ್ದಾರಿಯನ್ನು ಆಗಿನ ಸಚಿವ ಕೆ.ಎಂ.ಮುನ್ಶಿ ವಹಿಸಿಕೊಂಡರು. 1950ರ ಮೇ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿತು. ಕೇವಲ 5-6 ತಿಂಗಳಲ್ಲಿ ಸಂಪೂರ್ಣ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಈ ಮಂದಿರ ನಿರ್ಮಾಣಕ್ಕೆ ಜನರಿಂದ 25 ಲಕ್ಷ ರೂ. ಸಂಗ್ರಹವಾಗಿತ್ತು. ಸರ್ಕಾರದಿಂದ ಒಂದು ನಯಾ ಪೈಸೆ ಕೂಡ ತೆಗೆದುಕೊಳ್ಳದೆ ದೇವಸ್ಥಾನವನ್ನು ನಿರ್ಮಾಣ ಮಾಡಲಾಯಿತು. 1951ರ ಮೇ 11ರಂದು ಪ್ರಥಮ ರಾಷ್ಟçಪತಿ ಬಾಬು ರಾಜೇಂದ್ರ ಪ್ರಸಾದ್ ಪ್ರಾಣಪ್ರತಿಷ್ಠಾಪನೆ ಮಾಡಿದರು.

Previous articleಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಮುಳುಗಿ ಪಶು ವೈದ್ಯ ಸಾವು
Next articleವಾಯುಭಾರ ಕುಸಿತ: ಮುಂದಿನ 3 ದಿನ ಚಳಿಯ ತೀವ್ರತೆ ಹೆಚ್ಚಳ