ನವದೆಹಲಿ: ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧ ಮತ್ತು ತಾರತಮ್ಯದ ಕುರಿತು 9 ನ್ಯಾಯಮೂರ್ತಿಗಳ ಪೀಠ ಏ.7 ರಿಂದ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಯಲ್ಯ ಬಾಗ್ನಿ, ವಿಪುಲ್ ಪಾಂಚೋಲಿ ನೇತೃತ್ವದ ಪೀಠವು 9 ನ್ಯಾಯಮೂರ್ತಿಗಳನ್ನೊಳಗೊಂಡ ಪೀಠಕ್ಕೆ ವರ್ಗಾಯಿಸಿದೆ.
ಏಪ್ರಿಲ್ 7 ರಂದು ಬೆಳಿಗ್ಗೆ 10.30 ಕ್ಕೆ ವಿಚಾರಣೆ ಆರಂಭವಾಗಲಿದ್ದು, ಏ. 22 ರೊಳಗೆ ವಿಚಾರಣೆ ಪೂರ್ಣಗೊಳಿಸುವ ಗಡುವು ವಿಧಿಸಿಕೊಂಡಿದೆ. ಹಿಂದಿನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಏ. 7 ರಿಂದ 9ರವರೆಗೆ ವಿಚಾರಣೆ ನಡೆಸಲಾಗುವುದು. ಅದನ್ನು ವಿರೋಧಿಸುವವರ ಅರ್ಜಿಗಳನ್ನು ಏ. 14ರಿಂದ 16ರ ವರೆಗೆ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ: 25 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ತಲಾ 10 ಸಾವಿರ ಹಣ ವರ್ಗಾವಣೆ
ಮರು ಪ್ರತ್ಯಾರೋಪಗಳು ಇದ್ದರೆ ಏಪ್ರಿಲ್ 21ರಂದು ವಿಚಾರಣೆ ಮಾಡಲಾಗುವುದು. ನಂತರ ಸಲ್ಲಿಕೆಗಳನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಪೀಠ ಹೇಳಿದೆ. ವಕೀಲರು ವೇಳಾಪಟ್ಟಿಯನ್ನು ಪಾಲಿಸುವಂತೆ ಕೋರ್ಟ್ ಸೂಚನೆ ನೀಡಿದ್ದು, ಮಾರ್ಚ್ 14 ರಂದು ಅಥವಾ ಅದಕ್ಕೂ ಮೊದಲು ಲಿಖಿತ ಸಲ್ಲಿಕೆಗಳನ್ನು ಸಲ್ಲಿಸುವಂತೆ ಹೇಳಿದೆ.






















