ರಾಜ್ಕೋಟ್: ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಗುಜರಾತ್ಗೆ ದೊಡ್ಡ ಹೂಡಿಕೆಯನ್ನು ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಕೋಟ್ನಲ್ಲಿ ನಡೆದ ವ್ಯಾಪಾರ ಪ್ರದರ್ಶನವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಮಾತನಾಡಿದ ಅಂಬಾನಿ, ರಿಲಯನ್ಸ್ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 3.5 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಇದನ್ನು ಮುಂದಿನ ಐದು ವರ್ಷಗಳಲ್ಲಿ ದ್ವಿಗುಣಗೊಳಿಸಿ 7 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದರು.
ರಿಲಯನ್ಸ್ ಈಗಾಗಲೇ ಗುಜರಾತ್ನಲ್ಲಿ ಅತಿದೊಡ್ಡ ಹೂಡಿಕೆದಾರನಾಗಿದ್ದು, ಈ ಹೊಸ ಹೂಡಿಕೆಯು ದೊಡ್ಡ ಪ್ರಮಾಣದಲ್ಲಿ ಉದ್ಯೋಗ, ಜೀವನೋಪಾಯ ಮತ್ತು ಸಮೃದ್ಧಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಮುಖೇಶ್ ಅಂಬಾನಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ ಅವರು, ಇಂದು ಭಾರತವು ಜಾಗತಿಕ ವೇದಿಕೆಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದರು.
ವಿಶ್ವದ ಅತಿದೊಡ್ಡ ಸಮಗ್ರ ಶುದ್ಧ ಇಂಧನ ಪರಿಸರ ವ್ಯವಸ್ಥೆಯನ್ನು ಜಾಮ್ನಗರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ ಸೌರ, ಇಂಧನ ಸಂಗ್ರಹಣೆ, ಹಸಿರು ಹೈಡ್ರೋಜನ್, ಹಸಿರು ರಸಗೊಬ್ಬರ, ಸುಸ್ಥಿರ ವಾಯುಯಾನ ಮತ್ತು ಕಡಲ ಇಂಧನವನ್ನು ಒಳಗೊಂಡಿರುತ್ತದೆ ಎಂದು ಮುಖೇಶ್ ಅಂಬಾನಿ ಹೇಳಿದರು.
ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಹೈಡ್ರೋಕಾರ್ಬನ್ ರಫ್ತುದಾರನಾಗಿದ್ದ ಜಾಮ್ನಗರವು ಈಗ ಹಸಿರು ಇಂಧನ ಮತ್ತು ಹಸಿರು ವಸ್ತುಗಳ ಅತಿದೊಡ್ಡ ರಫ್ತು ಕೇಂದ್ರವಾಗಲಿದೆ ಎಂದು ಅವರು ಹೇಳಿದರು.
ಇದರೊಂದಿಗೆ, ಭಾರತದ ಅತಿದೊಡ್ಡ ಎಐ-ಸಿದ್ಧ ಡೇಟಾ ಸೆಂಟರ್ನ್ನು ಜಾಮ್ನಗರದಲ್ಲಿ ಸ್ಥಾಪಿಸಲಾಗುವುದು. ಜಿಯೋ “ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟುಕುವ ಎಐ” ತಯಾರಿಸುವ ಗುರಿಯನ್ನು ಹೊಂದಿದೆ. ಇದರಿಂದ ಜನರು ತಮ್ಮ ಸ್ವಂತ ಭಾಷೆಯಲ್ಲಿ ಮತ್ತು ಅವರ ಸಾಧನಗಳಲ್ಲಿ ಎಐ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.
ಕಚ್ ಅನ್ನು ಜಾಗತಿಕ ಶುದ್ಧ ಇಂಧನ ಕೇಂದ್ರವನ್ನಾಗಿ ಮಾಡುವ ತಮ್ಮ ಬದ್ಧತೆಯನ್ನು ಅಂಬಾನಿ ಪುನರುಚ್ಚರಿಸಿದರು. ಸುಧಾರಿತ ಸಂಗ್ರಹಣೆ ಮತ್ತು ಆಧುನಿಕ ಗ್ರಿಡ್ ಮೂಲಕ ಹಗಲಿರುಳು ಶುದ್ಧ ವಿದ್ಯುತ್ ಒದಗಿಸುವ ಬಹು-ಗಿಗಾವ್ಯಾಟ್ ಸೌರ ಯೋಜನೆಯನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
2036ರ ಒಲಿಂಪಿಕ್ಸ್ ಅನ್ನು ಭಾರತಕ್ಕೆ ತರುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ರಿಲಯನ್ಸ್ ಫೌಂಡೇಶನ್ ಪಾಲುದಾರಿಕೆ ಹೊಂದಲಿದೆ. ಇದರ ಅಡಿಯಲ್ಲಿ, ಅಹಮದಾಬಾದ್ನ ನಾರಾನ್ಪುರದಲ್ಲಿರುವ ವೀರ್ ಸಾವರ್ಕರ್ ಮಲ್ಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ಗುಜರಾತ್ ಸರ್ಕಾರದ ಸಹಯೋಗದೊಂದಿಗೆ ನಿರ್ವಹಿಸಲಾಗುವುದು. ಇದಲ್ಲದೆ, ಮುಕೇಶ್ ಅಂಬಾನಿ ಜಾಮ್ನಗರದಲ್ಲಿ ವಿಶ್ವದರ್ಜೆಯ ಆಸ್ಪತ್ರೆ ಮತ್ತು ಶಾಲೆಯನ್ನು ವಿಸ್ತರಿಸುವುದಾಗಿ ಘೋಷಿಸಿದರು.





















