ಪೆಟ್ರೋಲ್ ಪಂಪ್ನಲ್ಲಿ ಸ್ಮೋಕ್ ಮಾಡ್ಬೇಡ ಎಂದಿದ್ದಕ್ಕೆ ಬೆಂಕಿ ಹಚ್ಚಿದ ವ್ಯಕ್ತಿ – CCTV ದೃಶ್ಯ ವೈರಲ್ – ಇಬ್ಬರು ಆರೋಪಿಗಳ ಬಂಧನ
ರಾಯ್ಪುರ: ಪೆಟ್ರೋಲ್ ಪಂಪ್ನಲ್ಲಿ ಧೂಮಪಾನ ಮಾಡಬೇಡಿ ಎಂದು ಹೇಳಿದ್ದಕ್ಕೆ ಸಿಟ್ಟುಗೊಂಡ ವ್ಯಕ್ತಿಯೊಬ್ಬ ಲೈಟರ್ ಬಳಸಿ ಇಂಧನ ನಳಿಕೆಗೆ ಬೆಂಕಿ ಹಚ್ಚಲು ಯತ್ನಿಸಿದ ಆತಂಕಕಾರಿ ಘಟನೆ ರಾಯ್ಪುರ ನಗರದ ಉರ್ಲಾ ಪ್ರದೇಶದಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಹಿತಿ ಪ್ರಕಾರ, ಬುಧುವಾರ ಸಂಜೆ ಈ ಘಟನೆ ಸಂಭವಿಸಿದೆ. ಧರ್ಮೇಂದ್ರ ಕ್ಷತ್ರಿ ಮತ್ತು ಇಮ್ರಾನ್ ಎಂಬ ಇಬ್ಬರು ಬೈಕ್ನಲ್ಲಿ ಪೆಟ್ರೋಲ್ ತುಂಬಿಸಲು ಬಂದಿದ್ದರು. ಇಮ್ರಾನ್ ಬೈಕ್ ಮೇಲೆ ಕುಳಿತಿದ್ದರೆ, ಧರ್ಮೇಂದ್ರ ಪಕ್ಕದಲ್ಲಿ ನಿಂತಿದ್ದನು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ
ಬೈಕ್ನ ಪೆಟ್ರೋಲ್ ಟ್ಯಾಂಕ್ ತೆರೆಯುತ್ತಿದ್ದಂತೆಯೇ ಧರ್ಮೇಂದ್ರ ಸಿಗರೇಟನ್ನು ಹೊತ್ತಿಸಲು ಯತ್ನಿಸಿದ್ದಾನೆ. ಈ ವೇಳೆ ಪೆಟ್ರೋಲ್ ತುಂಬಿಸುತ್ತಿದ್ದ ಸಿಬ್ಬಂದಿ ಹಾಗೂ ಬೈಕ್ ಸವಾರರು “ಇಲ್ಲಿ ಸ್ಮೋಕ್ ಮಾಡಬೇಡಿ” ಎಂದು ಎಚ್ಚರಿಸಿದ್ದಾರೆ. ಇದರಿಂದ ಕೋಪಗೊಂಡ ಧರ್ಮೇಂದ್ರ ಲೈಟರ್ ಉರಿಸಿ ಇಂಧನ ತುಂಬಿಸುವ ನಳಿಕೆಗೆ ಹಿಡಿದಿದ್ದಾನೆ.
ಕ್ಷಣಾರ್ಧದಲ್ಲಿ ಹೊತ್ತಿಕೊಂಡ ಬೆಂಕಿ: ಲೈಟರ್ನ ಬೆಂಕಿ ಇಂಧನಕ್ಕೆ ತಗುಲುತ್ತಿದ್ದಂತೆ ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಬೈಕ್ನ ಪೆಟ್ರೋಲ್ ಟ್ಯಾಂಕ್ ಹಾಗೂ ಪಂಪ್ ಯಂತ್ರದ ಭಾಗಕ್ಕೆ ಬೆಂಕಿ ವ್ಯಾಪಿಸಿದೆ. ಸ್ಥಳದಲ್ಲಿದ್ದವರು ಆತಂಕಗೊಂಡು ಓಡಿಹೋಗಿದ್ದಾರೆ. ಘಟನೆ ವೇಳೆ ಉರಿಯುತ್ತಿರುವ ಇಂಧನದ ಚಿಮ್ಮಾಟ ಆರೋಪಿಯ ಮೇಲೂ ಬಿದ್ದಿರುವ ದೃಶ್ಯ ವೈರಲ್ ಆಗಿದೆ. ಬೆಂಕಿ ಹತ್ತಿರದ ವಾಹನಗಳು ಹಾಗೂ ಇಂಧನ ಸಂಗ್ರಹಣಾ ಪ್ರದೇಶಗಳಿಗೆ ಹರಡುವ ಭೀತಿ ಎದುರಾಯಿತು.
ಇದನ್ನೂ ಓದಿ: ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲುತೂರಾಟ
ಸಿಬ್ಬಂದಿಯ ತ್ವರಿತ ಕ್ರಮದಿಂದ ತಪ್ಪಿದ ಮಹಾ ದುರಂತ : ಪೆಟ್ರೋಲ್ ಪಂಪ್ನ ಅಟೆಂಡೆಂಟ್ ಅತ್ಯಂತ ಚಾಕಚಕ್ಯತೆಯಿಂದ ಕಾರ್ಯನಿರ್ವಹಿಸಿದರು. ತಕ್ಷಣವೇ ಇಂಧನ ಪೈಪ್ ಅನ್ನು ತೆಗೆದು ಮುಖ್ಯ ಇಂಧನ ಪೂರೈಕೆಯನ್ನು ಆಫ್ ಮಾಡಿದರು. ಬಳಿಕ ಪಂಪ್ನಲ್ಲಿ ಲಭ್ಯವಿದ್ದ ಅಗ್ನಿಶಾಮಕ ಯಂತ್ರ (Fire Extinguisher) ಬಳಸಿ ಬೆಂಕಿಯನ್ನು ನಂದಿಸಿದರು. ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ಸಂಭವಿಸಬಹುದಾದ ಭಾರಿ ಸ್ಫೋಟ ಅಥವಾ ಅಗ್ನಿ ದುರಂತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ಬಂಧನ: ಘಟನೆಯ ಬಳಿಕ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪಂಪ್ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಂಪ್ ಮ್ಯಾನೇಜರ್ ನೀಡಿದ ದೂರು ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಉರ್ಲಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರೋಹಿತ್ ಮಹೇಲ್ಕರ್ ಅವರ ಪ್ರಕಾರ, ಬೆಂಕಿ ಹಚ್ಚುವಿಕೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಅಪಾಯ ಉಂಟುಮಾಡಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.






















