ನವದೆಹಲಿ: ಬಿಜೆಪಿಯ ವಿರುದ್ಧ ಹಾಗೂ ಪಕ್ಷದ ನಾಯಕರ ವಿರುದ್ಧ ಪದೇಪದೇ ಆಧಾರರಹಿತ ಆರೋಪ ಮಾಡಿ, ಬಳಿಕ ನ್ಯಾಯಾಲಯದಲ್ಲಿ ಕ್ಷಮೆಯಾಚಿಸುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಶೈಲಿಯಾಗಿದೆ ಎಂದು ಸಂಸದ ಅನುರಾಗ್ ಸಿಂಗ್ ಠಾಕೂರ್ ದೆಹಲಿಯಲ್ಲಿ ಇಂದು ತೀವ್ರ ವಾಗ್ದಾಳಿ ನಡೆಸಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮತಗಳ್ಳತನದ ಆರೋಪದ ಕುರಿತು ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಸಾಕ್ಷ್ಯಾಧಾರಗಳೊಂದಿಗೆ ಸ್ಪಷ್ಟನೆ ನೀಡಿದೆ ಎಂದು ನೆನಪಿಸಿದರು. “ಚುನಾವಣೆ ಆಯೋಗವೇ ನಿಖರ ದಾಖಲೆ ಮತ್ತು ತನಿಖೆಯ ಆಧಾರದ ಮೇಲೆ ವಿಷಯಕ್ಕೆ ತೆರೆ ಎಳೆದಿದೆ. ಆದರೂ ರಾಹುಲ್ ಗಾಂಧಿ ಮತಗಳ್ಳತನದಂತಹ ಗಂಭೀರ ಆರೋಪ ಮಾಡಿ ದೇಶದಲ್ಲಿ ಅಶಾಂತಿ ಸೃಷ್ಠಿಸಲು ಯತ್ನಿಸುತ್ತಿದ್ದಾರೆ. ಇದು ರಾಜಕೀಯ ಜವಾಬ್ದಾರಿಯುತ ನಡೆ ಅಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಠಾಕೂರ್ ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಡೆದ ಪ್ರಯತ್ನದ ಕುರಿತಂತೆ ಉಲ್ಲೇಖಿಸಿದರು. “ಆ ಸಮಯದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ಆಯೋಗವೇ ಎಫ್ಐಆರ್ ದಾಖಲಿಸಿದೆ. ಹೀಗಿರುವಾಗಲೂ ಇಂದಿಗೂ ಕಾಂಗ್ರೆಸ್ ನಾಯಕರು ಅದನ್ನು ಬಿಜೆಪಿ ಮೇಲೆ ತಿರುಗಿಸಿ ಆರೋಪಿಸುವುದು ಸರಿಯಲ್ಲ,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರಕ್ಕೂ ಅವರು ಉಲ್ಲೇಖ ಮಾಡಿದರು. “ಆ ಕ್ಷೇತ್ರದ ಶಾಸಕ ಕೆ.ವೈ. ನಂಜೇಗೌಡ ಅವರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಈ ಬಗ್ಗೆ ರಾಹುಲ್ ಗಾಂಧಿ ಉತ್ತರಿಸಬೇಕು,” ಎಂದು ಠಾಕೂರ್ ಆಗ್ರಹಿಸಿದರು.