ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ “ಮತ ಕಳ್ಳರನ್ನು ರಕ್ಷಿಸಲಾಗುತ್ತಿದೆ” ಎಂಬ ಗಂಭೀರ ಆರೋಪಗಳಿಗೆ ಭಾರತೀಯ ಚುನಾವಣಾ ಆಯೋಗ ಅಧಿಕೃತವಾಗಿ ತಿರುಗೇಟು ನೀಡಿದೆ. ಆಯೋಗ ತನ್ನ ಅಧಿಕೃತ ಸಾಮಾಜಿಕ ಜಾಲತಾಣ (X) ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ರಾಹುಲ್ ಗಾಂಧಿ ಅವರು ಮಾಡಿದ ಆರೋಪಗಳು ತಪ್ಪು ಹಾಗೂ ಆಧಾರರಹಿತ ಎಂದು ಹೇಳಿದೆ.
ಆಯೋಗದ ಸ್ಪಷ್ಟನೆ: ಯಾವುದೇ ಮತವನ್ನು ಆನ್ಲೈನ್ನಲ್ಲಿ ಅಳಿಸಲು ಸಾಧ್ಯವಿಲ್ಲ ಎಂದು ಆಯೋಗ ಖಂಡಿತವಾಗಿ ತಿಳಿಸಿದೆ. ಬಾಧಿತ ವ್ಯಕ್ತಿಯ ಒಪ್ಪಿಗೆ ಇಲ್ಲದಿದ್ದರೆ, ಯಾವುದೇ ಮತವನ್ನು ಅಳಿಸಲು ಸಾಧ್ಯವಿಲ್ಲವೆಂಬುದು ನಿಯಮ. ಹೀಗಾಗಿ ರಾಹುಲ್ ಗಾಂಧಿಯವರ ಆರೋಪಗಳು ತೀರಾ ಆಧಾರರಹಿತವಾಗಿವೆ ಎಂದು ಆಯೋಗ ಪ್ರತಿಕ್ರಿಯಿಸಿದೆ.
ಕರ್ನಾಟಕದ ಆಳಂದ ಕ್ಷೇತ್ರದಲ್ಲಿ ಮತ ಕಳ್ಳತನ – ರಾಹುಲ್ ಆರೋಪ: ರಾಹುಲ್ ಗಾಂಧಿ ಅವರು ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಕ್ಕೂ ಹೆಚ್ಚು ಮತಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರ ವಿರುದ್ಧವೂ ನೇರವಾಗಿ ಆರೋಪ ಮಾಡಿದ್ದರು. “ಚುನಾವಣೆಗೂ ಮುನ್ನ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ವ್ಯವಸ್ಥಿತವಾಗಿ ಅಳಿಸಲಾಯಿತು. ಮತ ಕಳ್ಳರು ಹಾಗೂ ಪ್ರಜಾಪ್ರಭುತ್ವ ನಾಶಪಡಿಸುವವರನ್ನು ಜ್ಞಾನೇಶ್ ಕುಮಾರ್ ರಕ್ಷಿಸುತ್ತಿದ್ದಾರೆ ಎಂದಿದ್ದರು
ರಾಜಕೀಯ ತೀವ್ರತೆ : ರಾಹುಲ್ ಗಾಂಧಿ ಅವರು ಇತ್ತೀಚೆಗೆ ನಡೆಸಿದ “ಹೈಡ್ರೋಜನ್ ಬಾಂಬ್ ಪತ್ರಿಕಾಗೋಷ್ಠಿ” ಯಲ್ಲಿಯೂ ಇದೇ ವಿಷಯವನ್ನು ಎತ್ತಿಕೊಂಡಿದ್ದರು. ಅವರು BJP ಹಾಗೂ ಚುನಾವಣಾ ಆಯೋಗವನ್ನು ಮತಗಳ್ಳತನದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗವೇ ನೇರವಾಗಿ ಸ್ಪಷ್ಟನೆ ನೀಡಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹಾಗೂ BJP ನಡುವೆ ಆರೋಪ-ಪ್ರತಿಯಾದರೋಪಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
