ಜಪಾನ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಜಪಾನ ಪ್ರಧಾನಿ ಶಿಗೀರು ಇಶಿಬಾ ಜೊತೆ ಬುಲೆಟ್ ರೈಲಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತದಲ್ಲಿ ಮೊದಲ ಬುಲೆಟ್ ರೈಲು ಯೋಜನೆಗಾಗಿ ಜಪಾನ್ 67 ಶತಕೋಟಿ ಡಾಲರ್ ಮೂಲಕ ಹೂಡಿಕೆಗೆ ಮುಂದಾಗಿದ್ದು, ಮುಂಬೈ-ಅಹಮದಾಬಾದ್ ಕಾರಿಡಾರ್ಗೆ ಹೈ-ಸ್ಪೀಡ್ ರೈಲು ಯೋಜನೆಗಾಗಿ ಜಪಾನ್ ತನ್ನ ಇ-10 ಸರಣಿಯ ಶಿಂಕನ್ಸೆನ್ ಬುಲೆಟ್ ರೈಲುಗಳನ್ನು 2030ರ ವೇಳೆಗೆ ಭಾರತಕ್ಕೆ ಪರಿಚಯಿಸಲು ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಮುಂಬೈ-ಅಹಮದಾಬಾದ್ಗೆ ಮೊದಲ ಬುಲೆಟ್: ಶಿಂಕನ್ಸೆನ್ ಬುಲೆಟ್ ರೈಲು ಮುಂಬೈಯಿಂದ ಅಹಮದಾಬಾದ್ವರೆಗೆ ಇರುವ 508 ಕಿ.ಮೀ ದೂರವನ್ನು ಕೇವಲ 2 ಗಂಟೆಯಿಂದ 2.5 ಗಂಟೆಯ ಒಳಗೆ ಕ್ರಮಿಸಲಿದೆ. ಪ್ರಸ್ತುತ ಕ್ರಮಿಸುವ ರೈಲುಗಳು ಸುಮಾರು 7 ರಿಂದ 8 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತವೆ. ಇದರಿಂದಾಗಿ ಗಮನಾರ್ಹವಾಗಿ ಪ್ರಯಾಣಿಕರ ಪ್ರಯಾಣದ ಸಮಯ ಕಡಿಮೆಯಾಗಲಿದೆ.
ಗಂಟೆಗೆ 320 ಕಿ.ಮೀ ವೇಗ: ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡಿ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಭೂಕಂಪ ಪತ್ತೆ ಹಚ್ಚುವ ವ್ಯವಸ್ಥೆ, ಶಬ್ದ ಮಾಲಿನ್ಯ ಕಡಿತ ಮತ್ತು ಇಂಧನ ದಕ್ಷತೆಯಂತಹ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಶಿಂಕನ್ಸೆನ್ ಬುಲೆಟ್ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಇ-10 ಸರಣಿಯ ಶಿಂಕನ್ಸೆನ್ ಬುಲೆಟ್ ರೈಲು ಈ ಹಿಂದಿನ ಇ-1, ಇ5 ಸರಣಿಯ ರೈಲಗಿಂತ ಹೆಚ್ಚು ಪರಿಸರ ಸ್ನೇಹಿ, ಕಡಿಮೆ ಇಂಧನ ದಕ್ಷತೆಯ ತಂತ್ರಜ್ಞಾನದಿಂದ ಕೂಡಿದೆ.
ಈ ರೈಲಲ್ಲಿ ಏನೆಲ್ಲಾ ಸೌಲಭ್ಯ ಇರುತ್ತೆ?: ವೈ-ಫೈ ಮತ್ತು ಯುಎಸ್ಬಿ ಪೋರ್ಟ್ಗಳು ಜತೆಗೆ ಅಗಲವಾದ ಆಸನಗಳು ಮತ್ತು ವೀಲ್ಚೇರ್ಗಳಿರಲಿವೆ. ನವೀಕರಿಸಿದ ಟ್ರೈನ್ ಡೆಸ್ಕ್ ಸೇವೆಯು ಪ್ರತಿ ಸೀಟಿನಲ್ಲಿ ವಿಸ್ತೃತ ಲಗೇಜ್ ಸಂಗ್ರಹಣಾ ಪ್ರದೇಶಗಳು ಮತ್ತು ವಿದ್ಯುತ್ ಔಟ್ಲೆಟ್ಗಳಿಂದ ಕೂಡಿರಲಿದೆ. ಈ ರೈಲಿನ ವಿನ್ಯಾಸ ಜಪಾನ್ನ ಪ್ರಸಿದ್ಧ ಚರ್ರಿ ಹೂವುಗಳಿಂದ ಪ್ರೇರಿತವಾಗಿದೆ. ವ್ಯಾಪಾರ ವೇದಿಕೆಯಲ್ಲಿ ಎರಡೂ ದೇಶಗಳ ಕಂಪನಿಗಳು 10,790 ಕೋಟಿ ಮತ್ತು 150 ವಿವಿಧ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ.
ಶೀಘ್ರದಲ್ಲೇ ಬರಲಿವೆ ಇ5 ಮತ್ತು ಜಿಐಟಿ ರೈಲುಗಳು: ಜಪಾನೀಸ್ ತಂತ್ರಜ್ಞಾನವನ್ನು ವಿಳಂಬವಿಲ್ಲದೇ ಶೀಘ್ರದಲ್ಲೇ ಹಸ್ತಾಂತರಿಸಲಾಗುವುದು ಎಂದು ಪ್ರಧಾನಿ ಮೋದಿಗೆ ಇಶಿಬಾ ಭರವಸೆ ನೀಡಿದ್ದಾರೆ. ಪೂರ್ವಸಿದ್ಧತಾ ಕಾರ್ಯಾಚರಣೆಯ ಭಾಗವಾಗಿ ಇ5 ಸರಣಿಯ ಮತ್ತು ಜಿಐಟಿ ರೈಲುಗಳನ್ನು ಭಾರತಕ್ಕೆ ಹಸ್ತಾಂತರಿಸಲು ಜಪಾನ್ ಸಮ್ಮತಿಸಿದೆ. ಶಿಂಕನ್ಸೆನ್ ಭೂಕಂಪ ಪತ್ತೆ ಮಾಡುವುದರ ಜತೆ ರೈಲುಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸುವುದನ್ನು ಸಹ ತಡೆಗಟ್ಟಲಿದೆ. ಕಾರ್ಯಚರಣೆ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ರೈಲು ನಿಯಂತ್ರಣ ವ್ಯವಸ್ಥೆ ಇರಲಿದೆ.
ವರ್ಧಿತ ಬ್ರೇಕಿಂಗ್ ವ್ಯವಸ್ಥೆ: ಇ10 ಬಲವಾದ, ಅತ್ಯಾಧುನಿಕ ಬ್ರೇಕ್ಗಳನ್ನು ಹೊಂದಿದ್ದು, ಇ5 ಸರಣಿಗೆ ಹೋಲಿಸಿದರೆ ಅದರ ನಿಲುಗಡೆ ದೂರವನ್ನು 15%ರಷ್ಟು ಕಡಿಮೆ ಮಾಡುತ್ತದೆ. ಇದು ಭಾರತದ ಹೆಚ್ಚಿನ ಸಾಂದ್ರತೆಯ ಪ್ರದೇಶಗಳು ಮತ್ತು ಭೂಕಂಪ ಪೀಡಿತ ವಲಯಗಳಿಗೆ ಹೆಚ್ಚು ಸಹಾಯಕಾರಿ.