ದೆಹಲಿ: ದೇಶದ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಅನುಮಾನ ಹುಟ್ಟು ಹಾಕುತ್ತಿದೆ. ಸರಿಯಾಗಿ ಚುನಾವಣೆ ನಡೆದರೆ ಬಿಜೆಪಿ ಒಂದು ಸ್ಥಾನವನ್ನೂ ಗೆಲುವುದಿಲ್ಲ. ಬಿಜೆಪಿ ‘ವೋಟ್ ಚೋರಿ’ ಮೂಲಕ ಗೆಲ್ಲುತ್ತದೆ ಎಂದು ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಮತ ಚೋರಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಬಿಜೆಪಿಗೆ ಸವಾಲು ಹಾಕಿದರು.
ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆದರೆ ಬಿಜೆಪಿ ಎಂದಿಗೂ ಗೆಲ್ಲುವುದಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಚುನಾವಣಾ ಆಯೋಗ ಸೇರಿದಂತೆ ದೇಶದ ಎಲ್ಲ ಸಂಸ್ಥೆಗಳು ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತವೆ ಎಂದರು.
ಇದನ್ನೂ ಓದಿ: ಮೋದಿ – ಆರ್ಎಸ್ಎಸ್ ಸರ್ಕಾರ ತೆಗೆದುಹಾಕುತ್ತೇವೆ: ರಾಹುಲ್ ಪ್ರತಿಜ್ಞೆ
ಬಿಹಾರದ ಚುನಾವಣೆ ಸಂದರ್ಭದಲ್ಲಿ ಪ್ರತಿ ಮಹಿಳೆಗೆ ಬಿಜೆಪಿ 10,000 ರೂ. ಪಾವತಿಸಿದೆ. ಇದು ಚುನಾವಣಾ ಆಯೋಗಕ್ಕೇ ಗೊತ್ತೇ ಆಗಿಲ್ಲವೇ, ಇದು ವೋಟ್ ಚೋರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ದೇಶದ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಸಂಚು ಮಾಡಿದ್ದಾರೆ. ಇದಕ್ಕೆಲ್ಲ ಅವರೇ ಉತ್ತರಿಸಬೇಕು ಎಂದರು.





















