ತೆಲಂಗಾಣದ ವಾರಂಗಲ್ನಲ್ಲಿ ನಡೆದ ದಾರುಣ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಗಂಡು ಮಗುವಿನ ಆಸೆಗಾಗಿ ವ್ಯಕ್ತಿಯೊಬ್ಬನು ತನ್ನ ಗರ್ಭಿಣಿ ಪತ್ನಿ ಹಾಗೂ ಇಬ್ಬರು ಪುಟ್ಟ ಪುತ್ರಿಯರನ್ನು ಸಾಯಿಸಿದ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.
ಫರ್ಹತ್ (26) ಮತ್ತು ಆಕೆಯ ಇಬ್ಬರು ಅಪ್ರಾಪ್ತ ಪುತ್ರಿಯರಾದ ಉಮೇರಾ (8) ಹಾಗೂ ಆಯೇಷಾ (6) ಅವರ ಶವಗಳು ವಾರಂಗಲ್-ಖಮ್ಮಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈಜುಕೊಳದಲ್ಲಿ ಪತ್ತೆಯಾಗಿದ್ದವು. ಆರಂಭದಲ್ಲಿ, ರಾತ್ರಿ ಆಕಸ್ಮಿಕವಾಗಿ ಈಜುಕೊಳಕ್ಕೆ ಜಾರಿದ ಪರಿಣಾಮ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪತಿ ಅಜರುದ್ದೀನ್ ತಿಳಿಸಿದ್ದ.
ಆದರೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ನಿಜಾಂಶ ಬೆಳಕಿಗೆ ಬಂದಿದೆ. ಅಜರುದ್ದೀನ್ನೇ ಪತ್ನಿ ಫರ್ಹತ್ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಈಜುಕೊಳಕ್ಕೆ ಕರೆದೊಯ್ದು ನೀರಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕೃತ್ಯಕ್ಕೂ ಮುನ್ನ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರಸ್ತುತ ಆರೋಪಿ ಪರಾರಿಯಾಗಿದ್ದಾನೆ.
ಅಜರುದ್ದೀನ್ ಮತ್ತು ಫರ್ಹತ್ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದರು. ಫರ್ಹತ್ ಮತ್ತೊಂದು ಮಗುವಿಗೆ ಗರ್ಭಿಣಿಯಾಗಿದ್ದು, ಅದು ಕೂಡ ಹೆಣ್ಣು ಮಗು ಎಂಬುದು ತಿಳಿದುಬಂದಿತ್ತು. ಈ ವಿಚಾರವಾಗಿ ದಂಪತಿ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಅಜರುದ್ದೀನ್ ಗಂಡು ಮಗುವನ್ನು ಬಯಸಿದ್ದು, ಗರ್ಭಪಾತ ಮಾಡಲು ಫರ್ಹತ್ ಮೇಲೆ ಒತ್ತಡ ಹಾಕಿದ್ದ. ಆದರೆ ಫರ್ಹತ್ ಅದನ್ನು ನಿರಾಕರಿಸಿದ್ದರಿಂದ ಬೇಸತ್ತು ಈ ಕೃತ್ಯ ಎಸಗಿದ್ದಾನೆ.























