ಹುಬ್ಬಳ್ಳಿ: ಕರ್ನಾಟಕ ಕಾಂಗ್ರೆಸ್ ನಿರ್ಧಾರವು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರನ್ನು ಬೆಂಬಲಿಸುವಂಥ ಕಾರ್ಯವನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಜಾದ ಜೋಶಿ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಕೇಸ್ ವಾಪಸ್ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ನಿರ್ಧಾರವು ಅವರ ಮತಾಂಧತೆಯ ಪರಮಾವಧಿಯನ್ನು ಪ್ರತಿಬಿಂಬಿಸುತ್ತದೆ. ಆ ಘಟನೆಯು ಭಯೋತ್ಪಾದನಾ ಚಟುವಟಿಕೆಗೆ ಸಮಾನವಾದ ಘಟನೆಯಾಗಿದ್ದು, ಪ್ರಕರಣವು ಎನ್ಐಎ ನ್ಯಾಯಾಲಯದಲ್ಲಿದೆ. ಆರೋಪಿಗಳ ಜಾಮೀನು ಉಚ್ಛ,ಸರ್ವೋಚ್ಛ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿ ತಿರಸ್ಕರಿಸ್ಕೃತಗೊಂಡಿದ್ದವು. ಪೋಲಿಸ್ ಹಾಗೂ ನ್ಯಾಯಾಂಗ ಎರಡೂ ಇಲಾಖೆಗಳು ಪ್ರಕರಣವನ್ನು ಹಿಂಪಡೆಯುವುದನ್ನು ವಿರೋಧಿಸಿದರೂ ಕರ್ನಾಟಕ ಕಾಂಗ್ರೆಸ್ ನ ಈ ನಿರ್ಧಾರವು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರನ್ನು ಬೆಂಬಲಿಸುವಂಥ ಕಾರ್ಯವನ್ನು ಮಾಡುತ್ತಿದೆ. ಇದು ಅತ್ಯಂತ ಗಂಭೀರ ಪ್ರಕರಣ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದೇಶದಲ್ಲಿ ಮೋದಿ ಸರ್ಕಾರ ಮತಾಂಧ ಶಕ್ತಿಗಳ ಭಯೋತ್ಪಾದನಾ ಚಟುವಟಿಕೆ ವಿರುದ್ಧ ಹೋರಾಟ ಮಾಡುತ್ತಿರುವಾಗ ಕಾಂಗ್ರೆಸ್ ಅದಕ್ಕೆ ತದ್ವಿರುದ್ಧವಾಗಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದಿದ್ದಾರೆ.
























