ಹಳ್ಳಿ ಹಳ್ಳಿಗೂ ಬರಲಿವೆ ಜ್ಞಾನ ಸಂಪತ್ತು

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ರಾಮೀಣ ಗ್ರಂಥಾಲಯಗಳಿಗೆ ಡಿಜಿಟಲ್ ಸ್ಪರ್ಶ ನೀಡಿ ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದ ಯುವಜನತೆಗೆ ಅನುಕೂಲವಾಗಿರುವ ಸಾಕಷ್ಟು ಉದಾಹರಣೆಗಳು ಈಗಾಗಲೇ ನಮ್ಮ ಮುಂದಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಇದೀಗ ಮಕ್ಕಳು ಮತ್ತು ಹದಿಹರೆಯದವರಿಗೆ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಕಾರ್ಯಕ್ರಮದಡಿ ರಾಜ್ಯಾದ್ಯಂತ 6,599 ಗ್ರಾಮ ಗ್ರಂಥಾಲಯಗಳನ್ನು ಸ್ಥಾಪನೆ ಮಾಡುವುದಕ್ಕೆ ವಿನೂತನ ಯೋಜನೆಯೊಂದು ಜಾರಿಗೆ ಬರಲಿದೆ. ಈ ಗ್ರಂಥಾಲಯವು ₹1 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್, ಯುಪಿಎಸ್ ಹಾಗೂ ₹1 ಲಕ್ಷ ಮೊತ್ತದಲ್ಲಿ ಪೀಠೋಪಕರಣಗಳು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒಳಗೊಂಡಿರಲಿದೆ.

ಪ್ರತಿ ಗ್ರಾಮ ಗ್ರಂಥಾಲಯಕ್ಕೆ ₹2 ಲಕ್ಷ ಮೊತ್ತದಲ್ಲಿ ತಲಾ 2,687 ಪುಸ್ತಕಗಳನ್ನು ಶೀಘ್ರದಲ್ಲಿಯೇ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಯುವಜನತೆಯ ಶೈಕ್ಷಣಿಕ ಜೀವನಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಈ ಗ್ರಂಥಾಲಯದಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಿಸುವುದರೊಂದಿಗೆ, ಡಿಜಿಟಲ್ ಸಂಪನ್ಮೂಲಗಳ ಸೌಲಭ್ಯವನ್ನೂ ಒದಗಿಸಲಾಗುತ್ತದೆ.

ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಸಬಲರನ್ನಾಗಿಸುವ ನಮ್ಮ ಪ್ರಯತ್ನದಲ್ಲಿ ಇದು ಮತ್ತೊಂದು ಗಮನಾರ್ಹ ಹೆಜ್ಜೆಯಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದಿದ್ದಾರೆ.