ಸಂ. ಕ. ಸಮಾಚಾರ, ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೊತ್ತಿಕೊಂಡಿದ್ದು, ಅಧಿಕಾರಿಗಳ ತಂಡ ಶನಿವಾರ ಮಂಗಳೂರಿಗಾಗಮಿಸಿ ಆರಂಭಿಕ ಹಂತದ ಮಾಹಿತಿ ಕಲೆ ಹಾಕಲಾರಂಭಿಸಿದೆ.
ಬಜಪೆಯ ನಡು ರಸ್ತೆಯಲ್ಲಿ ಮೇ.೧ರಂದು ರಾತ್ರಿ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದ ಎನ್ಐಎ ತಂಡ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಅದರಂತೆ ಬೆಂಗಳೂರಿನಿಂದಾಗಮಿಸಿದ ಅಧಿಕಾರಿಗಳ ತಂಡ ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುತ್ತಿವೆ.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಇಲಾಖೆ ಎನ್ಐಎಗೆ ನೇರವಾಗಿ ವಹಿಸಿದೆ.
ಸುಹಾಸ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ೧೧ ಮಂದಿಯನ್ನು ಬಂಧಿಸಿದ್ದು, ಇನ್ನು ಹಲವರು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರಲ್ಲದೆ ಈ ಹತ್ಯೆಗೆ ದೇಶ, ವಿದೇಶಗಳಿಂದಲು ಫಂಡಿಂಗ್ ನಡೆದಿದೆ ಹಾಗೂ ನಿಷೇಧಿತ ಪಿಎಫ್ಐ ಪಾತ್ರ ಇದೆ ಎಂಬ ಗಂಭೀರ ಆರೋಪವು ಕೇಳಿಬಂದಿದ್ದರಿಂದ ತನಿಖೆಯ ಜವಾಬ್ದಾರಿಯನ್ನು ಎನ್ಐಎಗೆ ವಹಿಸಲಾಗಿದೆ.
ಎನ್ಐಎ ತಂಡ ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಸುಹಾಸ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗಿನ ತನಿಖೆ ಮತ್ತು ಅದರ ಪ್ರಗತಿಯ ಬಗ್ಗೆ ಮಾಹಿತಿ ಕಲೆಹಾಕಿದ್ದಲ್ಲದೆ ಸಹಾಸ್ ಹೆತ್ತವರನ್ನು ಭೇಟಿಯಾಗಿ ಒಂದಷ್ಟು ಮಾಹಿತಿ ಸಂಗ್ರಿಸುವ ಸಾಧ್ಯತೆ ಇದೆ.
ಫಾಜಿಲ್ ಹತ್ಯೆಗೆ ಪ್ರತೀಕಾರವಾಗಿ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ರಾಜ್ಯದ ಪೊಲೀಸ್ ಇಲಾಖೆಯಿಂದ ನಿಷ್ಪಕ್ಷಪಾತವಾದ ತನಿಖೆ ಸಾಧ್ಯವಿಲ್ಲ. ಹೀಗಾಗಿ ಎನ್ಐಎಗೆ ಒಪ್ಪಿಸಬೇಕೆಂದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು, ಶಾಸಕರು,ಸಂಸದರು, ನಾಯಕರು,ಸಂಘ ಪರಿವಾರದ ಸಂಘಟನೆಯ ಕಾರ್ಯಕರ್ತರು,ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿ ಆಗ್ರಹಿಸಿದ್ದಲ್ಲದೆ “ಬಜಪೆ ಚಲೋ” ಪ್ರತಿಭಟನೆಯ ಮೂಲಕವು ಗಮನಸೆಳೆದಿದ್ದರು.
ಸುಹಾಸ್ ಹತ್ಯಾ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಎನ್ಐಎ ಗೆ ಒಪ್ಪಿಸಿರವುದನ್ನು ಹೆತ್ತವರು,ಕುಟುಂಬಸ್ಥರು ಕೂಡ ಸ್ವಾಗತಿಸಿದ್ದಲ್ಲದೆ ಇದರ ಹಿಂದಿರುವ ಷಡ್ಯಂತ್ರವು ಬಯಲಿಗೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.