Home Advertisement
Home ತಾಜಾ ಸುದ್ದಿ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಪೊಲೀಸರ ನೇರ ಕೈವಾಡ

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಪೊಲೀಸರ ನೇರ ಕೈವಾಡ

0
96

ಮಂಗಳೂರು: ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ನೇರ ಕೈವಾಡವಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರ ಜತೆಗೆ ಬಜ್ಪೆ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ಈ ಹತ್ಯೆ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಶಾಸಕ ಉಮಾನಾಥ ಕೋಟ್ಯಾನ್, ಸಮಗ್ರ ತನಿಖೆಗಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುಹಾಸ್ ಹತ್ಯೆ ನಡೆದ ಸ್ಥಳದಲ್ಲಿ 25 ಜನ ಇದ್ದು, ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆ. ಸುತ್ತಲೂ ಕೋಟೆ ನಿರ್ಮಾಣ ಮಾಡಿ ಸುಹಾಸ್ ಹತ್ಯೆ ನಡೆಸಲು ಬಿಟ್ಟಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಈ ಹತ್ಯೆ ನಡೆದಿದೆ. ಬುರ್ಖಾಧಾರಿ ಮಹಿಳೆಯರೂ ಆರೋಪಿಗಳನ್ನು ಪಾರು ಮಾಡಿದ್ದಾರೆ. ಹತ್ಯೆಗೂ ಮುನ್ನವೇ ಪೊಲೀಸರು ಹಾಗೂ ಆರೋಪಿಗಳ ನಡುವೆ ಒಡಂಬಡಿಕೆ ಆಗಿತ್ತು. ಆದ್ದರಿಂದಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರೂ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿ ಅವರ ರಕ್ಷಣೆಗೆ ಮುಂದಾಗಿಲ್ಲ. ಒಡಂಬಡಿಕೆಯ ಭಾಗವಾಗಿ ಪೊಲೀಸರು ನಡೆದುಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ಜಿಲ್ಲೆಗೆ ಆಗಮಿಸಿದ ಗೃಹ ಸಚಿವರು, ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರನ್ನು ಸಭೆಗೆ ಆಹ್ವಾನಿಸಿಲ್ಲ. ಆದರೆ, ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ್ದಾರೆ. ಹತ್ಯೆಯಾದ ಸುಹಾಸ್ ಶೆಟ್ಟಿ ಮನೆಗೂ ತೆರಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜ್ಪೆಯಲ್ಲಿ ಹಿಂದುವಿನ ಕೊಲೆ ಆಗಿದೆ. ಆದರೆ, ಪೊಲೀಸರು ರಾತ್ರಿ ವೇಳೆ ಮಹಿಳೆಯರು ಇರುವ ಹಿಂದುಗಳ ಮನೆ ಮೇಲೆಯೇ ದಾಳಿ ನಡೆಸಿ ಬೆದರಿಸುತ್ತಿದ್ದಾರೆ. ಮೂಡುಶೆಡ್ಡೆಯಲ್ಲಿ ಪ್ರದೀಪ್ ಎಂಬವರ ಮನೆಗೆ, ಕಳವಾರಿನ ಮನೆಯೊಂದಕ್ಕೆ ರಾತ್ರಿ ಪೊಲೀಸರು ತೆರಳಿದ್ದಾರೆ. ಯಾವ ಮುಸಲ್ಮಾನರ ಮನೆಗೂ ಪೊಲೀಸರು ರಾತ್ರಿ ಹೋಗಿಲ್ಲ ಎಂದರು.
ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ರೌಡಿಶೀಟರ್ ಎಂದು ಆರೋಪಿಸಲಾಗುತ್ತಿದೆ. ಒಂದು ಪ್ರಕರಣವಿದ್ದರೂ ಪೊಲೀಸರು ರೌಡಿಶೀಟರ್ ಹಾಕುತ್ತಾರೆ. ಹಾಗಿದ್ದಲ್ಲಿ ರೌಡಿಶೀಟರ್‌ನನ್ನು ಕೊಲ್ಲಲು ಪೊಲೀಸರು ರೌಡಿಗಳನ್ನು ಕಳುಹಿಸಬಹುದೇ ಎಂದು ಪ್ರಶ್ನಿಸಿದರು.
ಸ್ಪೀಕರ್ ಸ್ಥಾನದಲ್ಲಿದ್ದವರು ರಾಜಕೀಯ ಮಾಡಬಾರದು. ಆದರೆ, ಯು.ಟಿ. ಖಾದರ್ ಅವರು ಸದಾ ಸುದ್ದಿಗೋಷ್ಠಿ ನಡೆಸುತ್ತಿರುತ್ತಾರೆ. ಫಾಝಿಲ್ ಕುಟುಂಬದ ಪರವಾಗಿ ಮಾತನಾಡಿದ ಖಾದರ್, ಫಾಝಿಲ್ ಸಹೋದರ ಆರೋಪಿಯಾದ ಬಳಿಕ ಏನು ಹೇಳುತ್ತಾರೆ? ಎಂದರು.
ಶಾಸಕ ಹರೀಶ್ ಪೂಂಜ ಅವರ ಶಾಸಕ ಸ್ಥಾನ ಅನರ್ಹತೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅವರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಲಾಗುತ್ತಿದೆ. ಪೂಂಜ ಅವರನ್ನು ಅನರ್ಹಗೊಳಿಸಿ ನೋಡಲಿ ಎಂದರು.
ಬಜ್ಪೆ ಬಳಿಯ ಪ್ಲ್ಯಾಟ್‌ವೊಂದರಲ್ಲಿ ಹತ್ಯೆ ಪ್ರಕರಣದ ಆರೋಪಿಗಳು ವಾಸಿಸುತ್ತಿದ್ದಾರೆ. ಪ್ರಶಾಂತ್, ಸುಖಾನಂದ ಶೆಟ್ಟಿ ಹತ್ಯೆ ಆರೋಪಿಗಳು ಇದೇ ಫ್ಲ್ಯಾಟ್‌ನಲ್ಲಿ ಇದ್ದರು. ಸುಹಾಸ್ ಕೊಲೆ ಆರೋಪಿಗಳು ಕೊಲೆಗೂ ಮುನ್ನ ವ್ಯವಸ್ಥಿತ ಯೋಜನೆ ರೂಪಿಸಿ ಇದೇ ಫ್ಲ್ಯಾಟ್‌ನಿಂದ ತೆರಳಿದ್ದಾರೆ. ಪೊಲೀಸರು ಇದುವರೆಗೆ ಈ ಫ್ಲ್ಯಾಟ್‌ಗೆ ತೆರಳಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದ ಅವರು, ಮಂಗಳೂರು ನಗರ ಪೊಲೀಸ್ ಆಯುಕ್ತರಂತಹ ಅಧಿಕಾರಿಯನ್ನು ನಾನು ಇದುವರೆಗೆ ನೋಡಿಲ್ಲ. ಎಲ್ಲದರಲ್ಲೂ ಅವರು ಡೀಲಿಂಗ್ ನಡೆಸುತ್ತಿದ್ದಾರೆ. ಮರಳುಗಾರಿಕೆ, ಇಸ್ಪೀಟ್, ಸಿಂಗಲ್ ನಂಬರ್ ಗೇಮ್ ಅವ್ಯಾಹತವಾಗಿ ನಡೆಯುತ್ತಿದೆ. ಕಮಿಷನರ್‌ಗೆ ಹಣ ನೀಡಬೇಕು ಎಂದು ಸಾಮಾನ್ಯ ಪೇದೆಯೂ ಹೇಳುತ್ತಿದ್ದಾರೆ ಎಂದರು.
ಸುಹಾಸ್ ಶೆಟ್ಟಿ ಅವರು ಆತ್ಮರಕ್ಷಣೆಗಾಗಿ ತನ್ನ ವಾಹನದಲ್ಲಿ ಇರಿಸಿಕೊಂಡಿದ್ದ ಆಯುಧಗಳನ್ನು ಪೊಲೀಸರು ಒತ್ತಾಯಪೂರ್ವಕವಾಗಿ ತೆಗೆಸಿದ್ದರು. ಪೊಲೀಸರ ಸಹಕಾರದಿಂದಲೇ ಈ ಕೊಲೆ ಆಗಿದೆ. ಆರೋಪಿಗಳನ್ನು ಪೊಲೀಸರು ಹಿಡಿದಿಲ್ಲ. ಒಡಂಬಡಿಕೆಯ ಭಾಗವಾಗಿ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಬಂಧನವಾದ ಬಳಿಕ ಪೊಲೀಸರು ಆರೋಪಿಗಳ ಮೈಮುಟ್ಟಿಲ್ಲ. ಸುಹಾಸ್ ಹತ್ಯೆಗೆ ಫಾಝಿಲ್ ಸಹೋದರ ಐದು ಲಕ್ಷ ರೂ. ನೀಡಿದ್ದ ಎಂದು ಹೇಳಲಾಗಿದೆ. ಆದರೆ, ದುಬೈನಿಂದ 50 ಲಕ್ಷ ರೂ. ಹಣ ನೀಡಲಾಗಿದೆ ಎಂದು ಉಮಾನಾಥ ಕೋಟ್ಯಾನ್ ಆಪಾದಿಸಿದರು.
ಬಜ್ಪೆ, ಸುರತ್ಕಲ್, ಪಣಂಬೂರು ಪೊಲೀಸ್ ಠಾಣೆಯ ಕೆಲ ಪೊಲೀಸರ ಮೊಬೈಲ್ ಕರೆಗಳನ್ನು ಪರಿಶೀಲಿಸಿದರೆ ಈ ಕೊಲೆಗೆ ಪೊಲೀಸರ ಸಹಕಾರ ಹಾಗೂ ಕೊಲೆ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಲಿದೆ ಎಂದು ಹೇಳಿದರು.

Previous articleಸುಹಾಸ್ ಹತ್ಯೆ ಎನ್‌ಐಎಗೆ ವಹಿಸಲು ಹಿಂದೇಟು ಯಾಕೆ
Next article“ಸರ್ಕಾರಿ ನ್ಯಾಯಬೆಲೆ ಅಂಗಡಿ” ಯಲ್ಲಿ ಬಂಗಾರಪ್ಪ