ಧಾರವಾಡ(ಹೆಬ್ಬಳ್ಳಿ): ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ೩೨ನೇ ಜಾತ್ರಾ ಮಹೋತ್ಸವದ ನಿಮಿತ್ತ ರಥೋತ್ಸವ ಜರುಗಿತು.
ಸಂಜೆ ೫ಕ್ಕೆ ಪ್ರಾರಂಭವಾದ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಉತ್ತತಿ, ಬಾಳೆಹಣ್ಣು, ಲಿಂಗ ಹಣ್ಣನ್ನು ರಥಕ್ಕೆ ಅರ್ಪಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.
ಜಾತ್ರಾ ಮಹೋತ್ಸವದ ನಿಮಿತ್ತ ಜ. ೬ರಿಂದ ೧೨ರ ವರೆಗೆ ಸಂಜೆ ಗ್ರಾಮದ ಚೈತನ್ಯಾಶ್ರಮದ ದತ್ತಾವಧೂತ ಮಹಾರಾಜರು, ಚಿಕ್ಕಮಂಗಳೂರು ಜಿಲ್ಲೆಯ ಮಾಚಗೊಂಡನಹಳ್ಳಿ ಬೇರುಗುಂಡಿ ಬ್ರಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರವಚನ ನಡೆಯಿತು.
ಜ. ೧೪ರಂದು ಕಡುಬಿನ ಕಾಳಗ ನಡೆಯಲಿದ್ದು, ಬೆಳಗ್ಗೆ ೯ರಿಂದ ಸಂಜೆ ೭ರ ವರೆಗೆ ಕೋಲಾಟ, ಕಲಾ ಕೋಲಿನ ಮೇಳ, ಜಾಂಜ ಮೇಳ, ಜಗ್ಗಲಗಿ ಮೇಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡೊಳ್ಳು ಕುಣಿತ, ಕರಡಿ ಮಜಲು ಮತ್ತು ಗೊಂಬೆ ಕುಣಿತ ನಡೆಯಲಿದೆ.