ಶಿವಮೊಗ್ಗಕ್ಕೆ ಮಂಜುನಾಥ್​ ಪಾರ್ಥಿವ ಶರೀರ ರವಾನೆ

0
146

ಶಿವಮೊಗ್ಗ: ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿನ‌ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪಾರ್ಥೀವ ಶರೀರ 9 ರಿಂದ 10 ಗಂಟೆಗೆ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಬೆಳಿಗ್ಗೆ 5-30 ರ ಸಮಯದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಚಿತ್ರದುರ್ಗದ ಮೂಲಕ ಪಾರ್ಥೀವ ಶರೀರ ಮತ್ತು ಅವರ ಪತ್ನಿ ಪಲ್ಲವಿ ಮತ್ತು ಮಗ ವಾಹನದಲ್ಲಿ ಹೊರಟಿದ್ದಾರೆ. ಅಂಬ್ಯೂಲೆನ್ಸ್ ನಲ್ಲಿ ಮಂಜುನಾಥ್ ಪಾರ್ಥೀವ ಶರೀರವಿದ್ದರೆ ಕಾರಿನಲ್ಲಿ ಪತ್ನಿ ಮತ್ತು ಮಗ ಹೊರಟಿದ್ದಾರೆ.

ಅಲ್ಲಲ್ಲಿ ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಸಾರ್ವಜನಿಕರು ಹೂವಿನ ಹಾರ ಹಾಕಿ ಗೌರವ ಸಮರ್ಪಿಸುತ್ತಿದ್ದಾರೆ. ಬೆಳಗ್ಗೆ 6-45 ಕ್ಕೆ ಪಾರ್ಥೀವ ಶರೀರವನ್ನ‌ ಹೊತ್ತ ವಾಹನ ತುಮಕೂರು ಬಿಟ್ಟಿದೆ ಎಂಬ ಮಾಹಿತಿ ಲಭಿಸಿದೆ.

ಶಿವಮೊಗ್ಗಕ್ಕೆ ಪಾರ್ಥೀವ ಶರೀರ ಪ್ರವೇಶಿಸುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಅದ್ದೂರಿ ಸ್ವಾಗತ ಮತ್ತು ಬೈಕ್ ರ್ಯಾಲಿ ನಡೆಯಲಿದೆ. ಮಂಜುನಾಥ್ ಅವರ ಮನೆಯ ವರೆಗೆ ಬೈಕ್ ರ‌್ಯಾಲಿ ನಡೆಯಲಿದ್ದು ನಂತರ ಮನೆಯ ಮುಂದೆ ಪಾರ್ಥೀವ ಶರೀರವನ್ನ ಸಾರ್ವಜನಿಕ ದರ್ಶನಕ್ಕೆ        ಇಡಲಾಗಿದೆ.

ನಂತರ ಪಾರ್ಥೀವ ಶರೀರವನ್ನ ಪಾದಯಾತ್ರೆ ಮೂಲಕ ನಗರದ ತುಂಗ ನದಿಯಲ್ಲಿರುವ ರೋಟರಿ ಚಿತಾಗಾರಕ್ಕೆ ಬರಲಿದೆ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ.