ವಕ್ಫ್ ತಿದ್ದುಪಡಿ ಬಡವರಿಗೆ ವರದಾನ

0
33

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗಿರುವ ಬಡ, ದುರ್ಬಲ ಜನರಿಗೆ ವರದಾನವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಸಭೆಯಲ್ಲಿ ಗುರುವಾರ ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ದೇವೇಗೌಡರು, ದೇಶದಲ್ಲಿರುವ ವಕ್ಫ್ ಬೋರ್ಡ್ ಗಳ ಆಸ್ತಿ ಸುಮಾರು ೧.೨ ಲಕ್ಷ ಕೋಟಿ ಬೆಲೆ ಬಾಳುತ್ತದೆ. ಇಂತಹ ಬೆಲೆ ಬಾಳುವ ಆಸ್ತಿಯನ್ನು ದಾನಿಗಳು ನೀಡಿದ್ದಾರೆ. ಈ ಆಸ್ತಿಯನ್ನು ರಕ್ಷಣೆ ಮಾಡಿ ಬಡ ಮುಸ್ಲಿಮರಿಗೆ ಅನುಕೂಲ ಆಗುವ ಕೆಲಸವನ್ನು ಈ ವಿಧೇಯಕ ಮಾಡುತ್ತಿದೆ ಎಂದರು. ನಾವು ಜಾತ್ಯತೀತ ಎಂದು ಹೇಳಿಕೊಂಡವರು ಮುಸ್ಲಿಮರಿಗೆ ಕಳೆದ ೭೫ ವರ್ಷಗಳಿಂದ ಅನ್ಯಾಯ ಮಾಡುತ್ತಲೇ ಇದ್ದಾರೆ ಎಂದು ಕಿಡಿಕಾರಿದ ದೇವೇಗೌಡರು, ವಕ್ಫ್ ಆಸ್ತಿ ದುರ್ಬಳಕೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವಿಧೇಯಕವೂ ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಮುಸ್ಲಿಮರನ್ನು ಮೇಲೆತ್ತುತ್ತದೆ. ಆದರೆ, ಎಲ್ಲಿಯೂ ಅವರ ಧಾರ್ಮಿಕ ನಂಬಿಕೆಗಳಲ್ಲಿ ಮೂಗು ತೂರಿಸುವುದಿಲ್ಲ. ಇದನ್ನು ಈ ವಿಧೇಯಕದ ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕು. ಈ ಮಸೂದೆ ಕೇವಲ ಕಂದಾಯ ಮತ್ತು ಆಡಳಿತ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುತ್ತದೆ ಎಂದು ಗೌಡರು ಸ್ಪಷ್ಟಪಡಿಸಿದರು.
ಈ ಮಸೂದೆಯು ವಕ್ಫ್ ಮಂಡಳಿಗಳ ಅಡಿಯಲ್ಲಿರುವ ಆಸ್ತಿಗಳ ಆಡಳಿತವನ್ನು ಮತ್ತು ಪ್ರಸ್ತುತ ಭಾರತದಾದ್ಯಂತ ೯.೪ ಲಕ್ಷ ಎಕರೆಗಳಷ್ಟು ಇರುವ ಒಟ್ಟು ೮.೭ ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತದೆ ಹಾಗೂ ಅದರ ಮೌಲ್ಯ ೧.೨ ಲಕ್ಷ ಕೋಟಿ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ಆಸ್ತಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೇವೇಗೌಡರು ಆರೋಪಿಸಿದರು.

Previous articleವಿದೇಶೀಯರ ಮುಂದೆ ಬಿಜೆಪಿ, ಆರೆಸ್ಸೆಸ್ ತಲೆಬಾಗುತ್ತವೆ
Next articleಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಲೋಕಸಭೆಯಲ್ಲಿ ಮಧ್ಯರಾತ್ರಿ ಒಪ್ಪಿಗೆ