ವಿನಾಯಕ ಶಾಸ್ತ್ರಿ
ಗೋಕರ್ಣ: ಮುಕ್ತಿ ಮತ್ತು ಸಿದ್ಧಿ ಕ್ಷೇತ್ರ ಗೋಕರ್ಣ. ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಅವರಿಗೆ ಗೋಕರ್ಣದಲ್ಲಿ ಮುಕ್ತಿ ಸಿಕ್ಕಿದೆ. ಅವರ ಅಪರ ಕಾರ್ಯ ನೆರವೇರಿಸಲಾಗಿದೆ.
ನಾರಾಯಣ ಬಲಿ ಕಾರ್ಯ ನಡೆಸಿ ಯೋಧ ಸೆರ್ಗಯ್ ಗ್ರಾಬ್ಲವ್ ಅವರಿಗೆ ಮೋಕ್ಷ ಸಿಗಲಿ ಎಂದು ಪ್ರಾರ್ಥಿಸಲಾಗಿದೆ. ಪುರೋಹಿತ ಪ್ರಶಾಂತ ಹಿರೇಗಂಗೆ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ವಿಧಿವಿಧಾನ ನೆರವೇರಿತು.
ದಶಕದ ಹಿಂದೆ ಭಾರತಕ್ಕೆ ಬಂದಿದ್ದ ರಷ್ಯಾದ ಯೋಧ ಸೆರ್ಗಯ್ ಗ್ರಾಬ್ಲವ್ ಇಲ್ಲಿನ ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆ ಪ್ರೀತಿ ಅವರನ್ನು ಗೋಕರ್ಣಕ್ಕೆ ಕರೆತಂದಿತ್ತು. ಸನಾತನ ಧರ್ಮದ ಕಡೆ ಆಕರ್ಷಣೆ ಹೊಂದಿದ್ದ ಅವರು ವಾರಾಣಸಿಯಲ್ಲಿ ಕಾಲ ಕಳೆದಿದ್ದರು. ಅಲ್ಲಿ ವೇದಮಂತ್ರಗಳ ಜೊತೆ ಸಂಸ್ಕೃತವನ್ನು ಸಹ ಅಧ್ಯಯನ ಮಾಡಿದ್ದರು. ಅದಾದ ನಂತರ ಸ್ವತಃ ಹೋಮ-ಹವನ ಮಾಡುವಷ್ಟು ಪ್ರಾವೀಣ್ಯತೆ ಪಡೆದಿದ್ದರು.
ಸೆರ್ಗೆಯ್ ಬಾಬಾ ಆಗಿ ಬದಲಾಗಿದ್ದ ಸೆರ್ಗಯ್ ಗ್ರಾಬ್ಲವ್ ಗೋಕರ್ಣವನ್ನು ನೆಚ್ಚಿಕೊಂಡಿದ್ದರು. ಅವರು ಆಗಾಗ ಗೋಕರ್ಣಕ್ಕೆ ಬರುತ್ತಿದ್ದರು. 18 ವರ್ಷಗಳಿಂದ ಗೋಕರ್ಣದ ಒಡನಾಟ ಹೊಂದಿದ್ದ ಅವರು ಸಾವಿರಕ್ಕೂ ಅಧಿಕ ಭಕ್ತರನ್ನು ಸಂಪಾದಿಸಿದ್ದರು. ಸೇನೆ ತೊರೆದಿದ್ದ ಅವರು ರಷ್ಯಾ-ಉಕ್ರೇನ್ ಯುದ್ಧ ಘೋಷಣೆ ಆದ ಕೂಡಲೇ ಮತ್ತೆ ಸೈನ್ಯ ಸೇರಿದ್ದರು. ಏಪ್ರಿಲ್ 26ರಂದು ಅವರು ಯುದ್ಧದಲ್ಲಿ ಮಡಿದರು. ಹೀಗಾಗಿ ಅವರಿಗೆ ಗೋಕರ್ಣದಲ್ಲಿ ಪಿಂಡ ಪ್ರದಾನ ಮಾಡಲಾಗಿದೆ. ಈ ಬಗ್ಗೆ ಅವರ ಒಡನಾಡಿ ಪರಮೇಶ್ವರ ಶಾಸ್ತ್ರಿ ಮಾಹಿತಿ ಹಂಚಿಕೊಂಡಿದ್ದಾರೆ.