ಮೂರು ಗಂಟೆಗಳ ವಿಚಾರಣೆ: ಮಧ್ಯಾಹ್ನಕ್ಕೆ ಮುಂದೂಡಿಕೆ

ಧಾರವಾಡ: ಮುಖ್ಯಂಮತ್ರಿ ಸಿದ್ಧರಾಮಯ್ಯ ವಿರುದ್ಧ ಮುಡಾ ಪ್ರಕರಣದ ವಿಚಾರಣೆ ನಿರಂತರ ಮೂರುವರೆ ಗಂಟೆ ನಡೆದಿದ್ದು, ಬಾಕಿ ವಿಚಾರಣೆಯನ್ನು ಮಧ್ಯಾಹ್ನ ೨:೩೦ಕ್ಕೆ ಮುಂದೂಡಲಾಗಿದೆ.
ಸಾಮಾನ್ಯವಾಗಿ ಮಧ್ಯಾಹ್ನ ೧:೩೦ಕ್ಕೆ ಊಟದ ಬಿಡುವು ಬಿಡಲಾಗುತ್ತಿತ್ತು. ಆದರೆ, ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅರ್ಧ ಗಂಟೆ ವರೆಗೆ ವಾದ-ವಿವಾದ ಆಲಿಸಿದ ಬಳಿಕ ಮಧ್ಯಾಹ್ನ ೨:೩೦ಕ್ಕೆ ಮುಂದೂಡಿದರು.
ಮೊದಲು ವಾದ ಮಾಡಿದ ಸ್ನೇಹಮಯಿ ಕೃಷ್ಣ ಪರ ವಕೀಲ ಮಣಿಂದರ್ ಸಿಂಗ್, ನರ್ಮದಾ ಬಾಯ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಓದಿದ್ದಾರೆ. ಸ್ಥಳೀಯ ರಾಜಕಾರಣಿಗಳು ಹಗರಣದಲ್ಲಿದ್ದಾಗ ಪೊಲೀಸರು ಆಳ, ಅಗಲಕ್ಕೆ ಹೋಗಿ ತನಿಖೆ ಮಾಡಲು ಸಾಧ್ಯವಿಲ್ಲ ಹೀಗಾಗಿ ಇದನ್ನು ಸಿಬಿಐಗೆ ಕೊಡುವುದು ಸೂಕ್ತ ಎಂದು ವಾದ ಮಾಡುವುದರ ಜೊತೆಗೆ ಮಿಥಿಲೇಶ್ ಕುಮಾರ್ ಪ್ರಕರಣದ ಆದೇಶವನ್ನು ಓದಿ ಸುದೀರ್ಘವಾಗಿ ವಾದ ಮಂಡಿಸಿದರು.

ನಮ್ಮ ಮೇಲ್ಮನವಿದಾರರು ಸಣ್ಣ ಭೂ ಮಾಲೀಕರಾಗಿದ್ದಾರೆ. ಅವರು 25 ವರ್ಷಗಳ ಹಿಂದೆಯೇ ಭೂಮಿ ಮಾರಾಟ ಮಾಡಿ ಅದು ಮುಗಿದು ಹೋಗಿದೆ. ಆದರೆ, ದೊಡ್ಡ ರಾಜಕಾರಣಿಗಳು ಇದರಲ್ಲಿ ಸಿಲುಕುವಂತಾಗಿದ್ದು, ನಮ್ಮ ಅರ್ಜಿದಾರರೂ ಇದರಕ್ಕಿ ಸಿಲುಕುವಂತಾಗಿದೆ. ಇದರಲ್ಲಿ ಹಾಲಿ ಸಿಎಂ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆದಿದೆ. ಇಂತಹ ಅರ್ಜಿಗಳಿಗೆ ಕೋರ್ಟ್ ಸಮಯ ವ್ಯರ್ಥ ಮಾಡಬೇಡಿ. ಲೋಕಾಯುಕ್ತ ಎಲ್ಲೂ ತನಿಖೆಯ ದಾರಿ ತಪ್ಪಿಸಿಲ್ಲ ಆದರೂ ಸಿಬಿಐ ತನಿಖೆಗೆ ವಹಿಸಿ ಎನ್ನುವುದು ಏಕೆ? ಪತ್ರಕರ್ತ, ಸಿನಿಮಾ ನಿರ್ಮಾಪಕಾಗಿದ್ದ ಸ್ನೇಹಮಯಿ ಕೃಷ್ಣ ಇಷ್ಟು ವರ್ಷ ಎಲ್ಲಿದ್ದರು? ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಪ್ರಕರಣಗಳಿಗೆ ಮಾತ್ರ ಆದ್ಯತೆ ನೀಡಬೇಕು. ಖಾಸಗಿ ಲಾಭಗಳಿಗೆ ಪ್ರಯತ್ನಿಸುವ ಅರ್ಜಿಗಳನ್ನು ಪರಿಗಣಿಸಬಾರದು ಎಂದು ಜಮೀನಿನ ಮೂಲ ಮಾಲೀಕರ ಪರ ವಕೀಲ ದುಷ್ಯಂತ ಧವೆ ವಾದ ಮಂಡಿಸಿದರು.

ಸಿಎಂ ಪರ ವಕೀಲ ಕಪಿಲ್ ಸಿಬಲ್ ವಾದ ಆರಂಭಿಸಿದ್ದಾರೆ. ವೀಡಿಯೋ ಕಾನ್ಫರನ್ಸ್ ಮೂಲಕ ಕಪಿಲ್ ಸಿಬಲ್ ಅವರು ಕಲಾಪಕ್ಕೆ ಹಾಜರಾಗಿದ್ದಾರೆ. ಬೆಳಿಗ್ಗೆ 10-30 ರಿಂದ ಕೋರ್ಟ್ ಕಲಾಪ ಆರಂಭವಾಗಿದ್ದು, ಈ ಮುಡಾ ಕೇಸ್ ವಿಚಾರಣೆಯೇ 2 ಗಂಟೆಯವರೆಗೂ ನಡೆದಿದ್ದು, ಇನ್ನೂ ಅರ್ಜಿಯ ವಿಚಾರಣೆ ಪೂರ್ಣಗೊಂಡಿಲ್ಲ.