ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಮೂಡಾ ಹಗರಣ ಸ್ಯಾಂಪಲ್ ಮಾತ್ರ. ಶೀಘ್ರದಲ್ಲೇ ಇನ್ನೂ ಕೆಲವು ಹಗರಣಗಳು ಹೊರ ಬರಲಿವೆ ಎಂದು ಮಾಜಿ ಸಂಸದ ನಳಿನಕುಮಾರ್ ಕಟೀಲ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ವಿಚಾರವಾಗಿ `ಇಡಿ’ ಸಂಸ್ಥೆ ಲೋಕಾಯುಕ್ತಕ್ಕೆ ಪತ್ರ ಬರೆದಿದೆ. ಲೋಕಾಯುಕ್ತ ಸಂಸ್ಥೆಯೂ ಪರಿಶೀಲನೆ ನಡೆಸಿದರೆ ಇನ್ನಷ್ಟು ಹಗರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ನುಡಿದರು.
ಭ್ರಷ್ಟಾಚಾರದ ಆರೋಪ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯಬಾರದು. ಮುಖಕ್ಕೆ ಮಸಿ ಬಳಿದುಕೊಂಡು ಜನರೆದುರು ಹೋಗುವ ಬದಲು, ಭಂಡತನ ಬಿಟ್ಟು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಆಂತರಿಕ ಸಮಸ್ಯೆ ಬೇಗ ಶಮನ ಆಗಲಿದೆ. ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದು ರಾಷ್ಟ್ರೀಯ ಅಧ್ಯಕ್ಷರು. ಏನೇ ಸಮಸ್ಯೆ ಇದ್ದರೂ ಮನೆಯಲ್ಲಿ ಬಗೆಹರಿಸಕೊಳ್ಳಬೇಕು. ನಮ್ಮ ರಾಷ್ಟ್ರೀಯ ನಾಯಕರು ಬೇಗ ಸರಿಪಡಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.