ಬೆಳಗಾವಿಯ ಚಳಿಗಾಲದ ಅಧಿವೇಶನ ಮಾದರಿಯಾಗಲಿ

0
32

ಬೆಳಗಾವಿ: ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಡಿ. ೯ರಿಂದ ಡಿ. ೨೦ರವರೆಗೆ ನಿಗದಿಯಾಗಿರುವ ವಿಧಾನಮಂಡಲ ಅಧಿವೇಶನವು ಈ ಬಾರಿಯು ಸಹ ಮಾದರಿಯಾಗುವ ರೀತಿಯಲ್ಲಿ ನಡೆಯಲು ಎಲ್ಲರ ಸಹಕಾರ ಕೋರುವೆ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಹೇಳಿದರು.
ಸುವರ್ಣಸೌಧದ ಕೊಠಡಿ ಸಂಖ್ಯೆ ೨೩೮ ರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಡಿ. ೯ರಂದು ಮೊದಲ ದಿನ ಬೆಳಗ್ಗೆ ೧೧ ರಿಂದ ಅಧಿವೇಶನವು ವಿದ್ಯುಕ್ತವಾಗಿ ಆರಂಭವಾಗಲಿದೆ. ಇದಕ್ಕು ಮೊದಲು ೧೦.೩೦ಕ್ಕೆ ಐತಿಹಾಸಿಕ ಅನುಭವ ಮಂಟಪ ಸ್ಮರಣೆಯ ಬೃಹತ್ ತೈಲ ವರ್ಣದ ಚಿತ್ರದ ಅನಾವರಣವನ್ನು ಮಾನ್ಯ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡುವರು. ವಿಧಾನಸಭೆಯ ಸಭಾಧ್ಯಕ್ಷರು, ವಿಧಾನ ಪರಿಷತನ ಸಭಾಪತಿಗಳು, ಉಪ ಸಭಾಪತಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವಾರು ಗಣ್ಯರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ವಿಧಾನಸಭೆ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ನಡೆಯಲಿದೆ. ಮಧ್ಯಾಹ್ನ ಬಿಎಸ್‌ಸಿ (ಕಲಾಪ ಸಲಹಾ ಸಮಿತಿ) ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮುಂದಿನ ಅಧಿವೇಶನದ ರೂಪುರೇಷಗಳ ಬಗ್ಗೆ ಸಮಗ್ರ ಚರ್ಚಿಸಿ ಅಂತಿಮಗೊಳಿಸಲಾಗುವುದು.
ಈ ಬಾರಿ ಅಧಿವೇಶನದಲ್ಲಿ ೫ ವಿಧೇಯಕಗಳ ಮೇಲೆ ಸುಧೀರ್ಘ ಚರ್ಚೆ ನಡೆಯಲಿದೆ. ಎರಡು ಆಧ್ಯಾದೇಶದ ಬದಲಿ ವಿಧೇಯಕಗಳನ್ನು ಪರ್ಯಾಲೋಚನೆಗೆ ತೆಗೆದುಕೊಳ್ಳಲಾಗುವುದು.
ಅಧಿವೇಶನದಲ್ಲಿ ೧೦ ದಿನಗಳ ಕಾಲ ಪ್ರಶ್ನೋತ್ತರ ಅವಧಿ ನಿಗದಿಪಡಿಸಲಾಗಿದೆ. ಗಮನ ಸೆಳೆಯುವ ಸೂಚನೆಗಳು, ಶೂನ್ಯ ವೇಳೆ, ನಿಲುವಳಿ ಸೂಚನೆ ನಡೆಸಲಾಗುವುದು. ಈವರೆಗೆ ೩೦೦೪ ಪ್ರಶ್ನೆಗಳು, ೨೦೫ ಗಮನ ಸೆಳೆಯುವ ಸೂಚನೆಗಳು, ೯೬ ನಿಯಮ ೩೫೧ರ ಸೂಚನೆಗಳನ್ನು ಸ್ವೀಕರಿಸಲಾಗಿದೆ. ಜತೆಗೆ ೩ ಖಾಸಗಿ ವಿಧೇಯಕಗಳನ್ನು ಸಹ ಸ್ವೀಕರಿಸಲಾಗಿದೆ ಎಂದರು.
ನಮ್ಮೆಲ್ಲರ ಸ್ವಾಭಿಮಾನದ ಊರಾದ ಬೆಳಗಾವಿಯ ಸುವರ್ಣಸೌಧದಲ್ಲಿ ಪರಂಪರೆಯಂತೆ ಪ್ರತಿ ವರ್ಷ ನಡೆಯಲಿರುವ ಈ ವಿಶೇಷ ಅಧಿವೇಶನದಲ್ಲಿ ಭಾಗಿಯಾಗಿ ಅಧಿವೇಶನದ ಯಶಸ್ಸಿಗೆ ಸಹಕಾರ ನೀಡುವ ನಾನಾ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಪ್ರತಿನಿಧಿಗಳಿಗೆ ವಸತಿ, ಊಟ, ಆಸನದ ವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಕಲಾಪದಲ್ಲಿ ಲಿಖಿತ ಪ್ರಶ್ನೆಗಳಿಗೆ ಉತ್ತರ ಪಡೆಯುವ ಪ್ರಕ್ರಿಯೆ ಸೇರಿದಂತೆ ನಾನಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದರು.
ಬೆಂಗಳೂರಿನ ವಿಧಾನಸೌಧದ ವಿಧಾನಸಭೆಯ ಮೊಗಸಾಲೆಯಲ್ಲಿ ಇರುವ ಮಾದರಿಯಲ್ಲಿಯೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಹೊಸದಾಗಿ ಸಭಾಧ್ಯಕ್ಷರ ಪೀಠವನ್ನು ಸಿದ್ದಪಡಿಸಲಾಗಿದೆ ಎಂದರು. ಅಧಿವೇಶನದ ಕಾರ್ಯವ್ಯವಸ್ಥೆಗಾಗಿ ೨೫೦೦ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಸೂಕ್ತ ಪೊಲೀಸ್ ಬಂದೋಬಸ್ತಗಾಗಿ ಅಂದಾಜು ೬೦೦೦ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು ೮೫೦೦ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ೧೦ ಸಮಿತಿಗಳನ್ನು ರಚಿಸಿ ವಸತಿ, ಸಾರಿಗೆ ಸೇರಿದಂತೆ ನಾನಾ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುವರ್ಣಸೌಧಕ್ಕೆ ಬರುವವರಿಗೆ ಅನುಕೂಲವಾಗಲು ಮುಖ್ಯದ್ವಾರದಿಂದ ಸೌಧದ ಕಟ್ಟಡದವರೆಗೆ ಕೆಲ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಕಲಾಪ ವೀಕ್ಷಣೆಗೆ ಆಗಮಿಸುವ ವಿದ್ಯಾರ್ಥಿ, ಶಿಕ್ಷಕರಿಗೆ ಮಾಹಿತಿಗಾಗಿ ಬೆಳಗಾವಿಯಲ್ಲಿ ೧೯೨೪ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ದಶಮಾನೋತ್ಸವ ನೆನಪಿನ ಛಾಯಾಚಿತ್ರಗಳ ಪ್ರದರ್ಶನಕ್ಕೆ ಏರ್ಪಾಡು ಮಾಡಲಾಗಿದೆ ಎಂದರು. ಇದಕ್ಕಾಗಿ ಮಹಾತ್ಮ ಗಾಂಧೀಜಿಯವರ ಅಪರೂಪದ ಭಾವಚಿತ್ರಗಳನ್ನು ಸಂಗ್ರಹಿಸಿ ಸುವರ್ಣಸೌಧದ ಆಯಾ ಕಡೆಗಳಲ್ಲಿ ಹಾಕಲಾಗಿದೆ ಎಂದರು.

Previous articleಅಧಿವೇಶನ ಸಿದ್ಧತೆ ಪರಿಶೀಲಿಸಿದ ಸಭಾಧ್ಯಕ್ಷರು
Next articleಶಂಕರಾಚಾರ್ಯರ ಅವಹೇಳನ: ಬ್ರಾಹ್ಮಣ ಮಹಾಸಭೆ ಖಂಡನೆ