ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಒಬ್ಬಂಟಿ, ಒಂಟಿ ಸಲಗ ಇರಬಹುದು. ಆದರೆ, ಮನೆ ಬಿಟ್ಟು ಹೋಗಿಲ್ಲ. ಮನೆಯಲ್ಲಿ ಒಂದಿಬ್ಬರು ತುಂಟರು ಇರುತ್ತಾರೆ. ಅವರಿಗೆ ಹಿರಿಯರು ಬುದ್ದಿ ಹೇಳುತ್ತಾರೆ. ಆಗಲೂ ತಿಳಿದುಕೊಳ್ಳದಿದ್ದರೆ ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆಪೆಟ್ಟು ಎಂಬಂತೆ ಕ್ರಮ ಆಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷದಲ್ಲೂ ಒಂದಿಷ್ಟು ಜನ ಅಸಮಾಧಾನಿಯರು ಇದ್ದೇ ಇರುತ್ತಾರೆ. ನಮ್ಮ ಪಕ್ಷದಲ್ಲೂ ಮೂರ್ನಾಲ್ಕು ಜನರಿಗೆ ಅಸಮಾಧಾನವಿರಬಹುದು. ಆದರೆ, ಎಲ್ಲರೂ ಪಕ್ಷದ ಜೊತೆಗೇ ಇದ್ದಾರೆ. ಕೆಲವರಿಗೆ ಬಹಿರಂಗವಾಗಿ ಹೇಳಿಕೆ ಕೊಟ್ಟು ಬಿಟ್ಟರೆ ದೊಡ್ಡವರಾಗಿ ಬಿಡ್ತೇವೆ ಎಂಬ ಭ್ರಮೆ ಇದೆ. ಅದು ಸರಿಯಲ್ಲ ಎಂದರು.