ಬಿಜೆಪಿಯವರ ಹಿಂದಿನ ಎಲ್ಲಾ ಆರೋಪಗಳು ಹೂರಣವಿಲ್ಲದ ಹೊಳಿಗೆಯಂತೆ ಕಳೆದುಹೋದವು: ಬಿಜೆಪಿ ನಾಯಕರು ಉತ್ತರಿಸಲೇಬೇಕಾದ ಕೆಲವು ಪ್ರಶ್ನೆಗಳಿವೆ
ಬೆಂಗಳೂರು: ಇಂದು ಕಲಬುರಗಿಗೆ ಆಗಮಿಸುವ ಕರ್ನಾಟಕ ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸ್ವಾಗತ ಕೋರಿದ್ದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬಿಜೆಪಿ ನಾಯಕರು ಈ ಹಿಂದೆ ಕಲಬುರಗಿಗೆ ಬಂದಾಗ ಮಾಡಿದ ಆರೋಪಗಳನ್ನು ಬಿಚ್ಚಿಟ್ಟಿದ್ದಾರೆ.
ಬಿಜೆಪಿ ನಾಯಕರೇ ಈ ಹಿಂದೆ ತಾವು ಕಲಬುರಗಿಗೆ ಬಂದಾಗ, ನಿಮ್ಮ ಆರೋಪಗಳ ಸ್ಯಾಂಪಲ್ ಇಂತಿವೆ,
- ಪ್ರಿಯಾಂಕ್ ಖರ್ಗೆ ಬಿಜೆಪಿ ಅಭ್ಯರ್ಥಿ ಮಣಿಕಾಂಠ ರಾಥೋಡ್ ಕೊಲ್ಲಲು ಪ್ರಯತ್ನಿಸಿದರು. ಈ ಆರೋಪದ ಕತೆ ಏನಾಯಿತು?
- ಪ್ರಿಯಾಂಕ್ ಖರ್ಗೆ ಸಚಿನ್ ಪಾಂಚಾಲ್ ಸಾವಿಗೆ ಕಾರಣರು. ದಯವಿಟ್ಟು ಈ ಪ್ರಕರಣದ ತನಿಖೆಯ ಬಗ್ಗೆ ಜನರಿಗೆ ವಿವರಿಸಿ.
- ಈಗ ಹೊಸ ಆರೋಪವಾಗಿ ಅಕ್ರಮ ಮರಳು ಗಣಿಗಾರಿಕೆಯಿಂದ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತಿದೀರಿ, ಇದು ಕೂಡ ಸುಳ್ಳು ಎಂದು ಸಾಬೀತಾಗುತ್ತದೆ.
ಬಿಜೆಪಿಯವರ ಹಿಂದಿನ ಎಲ್ಲಾ ಆರೋಪಗಳು ಹೂರಣವಿಲ್ಲದ ಹೊಳಿಗೆಯಂತೆ ಕಳೆದುಹೋದವು.
ಆದರೆ,
ಬಿಜೆಪಿ ನಾಯಕರು ಉತ್ತರಿಸಲೇಬೇಕಾದ ಕೆಲವು ಪ್ರಶ್ನೆಗಳಿವೆ,
- ಚಿತ್ತಾಪುರ ಕ್ಷೇತ್ರದ ನಿಮ್ಮ ಘನ ಅಭ್ಯರ್ಥಿ ಬಡವರ ಅಕ್ಕಿ ಕದಿಯುವ ಕಸುಬು ಮುಂದುವರೆಸಿರುವುದೇಕೆ?
- ಕಾಳಗಿಯಲ್ಲಿರುವ ಭೋವಿ ನಿಗಮದ ಹಗರಣದಲ್ಲಿ ಭಾಗಿಯಾಗಿರುವ ಎ2 ಆರೋಪಿ ಯಾರು ಎನ್ನುವುದನ್ನು ವಿವರಿಸುವಿರಾ?
- ಕೋಲಿ ಸಮುದಾಯಕ್ಕೆ ಎಸ್ ಟಿ ಸ್ಥಾನಮಾನ ನೀಡುವ ಪ್ರಸ್ತಾವನೆಗೆ ನಿಮ್ಮ ಮೋದಿಯವರು ಮನ್ನಣೆ ನೀಡದೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳಿಸಿದ್ದೇಕೆ ಎನ್ನುವುದನ್ನು ಹೇಳುವಿರಾ? ಎಂದು ಪ್ರಶ್ನಿಸಿದ್ದಾರೆ.