ಕಲಬುರಗಿ: ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್ ದರ ಏರಿಕೆಗೂ ಹಾಗೂ ಪಂಚ ಗ್ಯಾರಂಟಿ ಯೋಜನೆಗಳಿಗೂ ಏನು ಸಂಬಂಧ ಇಲ್ಲ, ದರ ಪರಿಷ್ಕರಣೆ ಒಂದು ಸಹಜ ಪ್ರಕ್ರಿಯೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಹೇಳಿದರು.
ನಗರದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಬಜೆಟ್ನಲ್ಲಿ ಗ್ಯಾರಂಟಿಗಳಿಗಾಗಿ ೫೯ ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದರು. ಡಿಸೇಲ್ ಹಾಗೂ ಪೆಟ್ರೋಲ್ ದರ ಏರಿಕೆ ಕಂಡಿದರಿಂದ ಅನಿವಾರ್ಯವಾಗಿ ದರ ಹೆಚ್ಚಿಸಲಾಗಿದೆ. ಬಸ್ ದರದಿಂದ ಕೇವಲ ೪೦೦ ಕೋಟಿ ರೂ. ಮಾತ್ರ ಸರ್ಕಾರಕ್ಕೆ ಬರಲಿದೆ ಎಂದರು.
ಸಿಎಂ ಸಿದ್ದರಾಮಯ್ಯ ಬಣದ ಸಚಿವರ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಸಿಎಂ, ಮಹಾದೇವಪ್ಪ, ರಾಜಣ್ಣ, ಸತೀಶ್ ಜಾರಕಿಹೊಳಿ ಎಲ್ಲರೂ ಹಳೇ ಸ್ನೇಹಿತರು. ಸೌರ್ಹದಯುತವಾಗಿ ಒಂದು ಕಡೆ ಸೇರಿದ್ದಾರೆ. ಅದರಲ್ಲೇನು ವಿಶೇಷ ಇಲ್ಲ. ಹಳೇ ಸ್ನೇಹಿತರೆಲ್ಲಾ ಒಂದು ಕಡೆ ಸೇರಿ ಊಟ ಮಾಡಿದ್ದಾರೆ ಎಂದರು.
ಸಂಪುಟ ಪುನಾರಚನೆ ಮಾಡೋದು ಹೈಕಮಾಂಡ್ಗೆ ಬಿಟ್ಟ ವಿಚಾರ. ಸಿಎಂ ಅವರಿಗೆ ಪರಮಾಧಿಕಾರವಿದೆ. ಆ ಬಗೆ ನಮಗೇನು ಮಾಹಿತಿಯಿಲ್ಲ. ನಮ್ಮಿಂದ ಯಾರು ಯಾವ ರಿಪೋರ್ಟು ಕೇಳಿಲ್ಲ ಎಂದರು. ನಾಳೆ ಬಿಜೆಪಿಯಿಂದ ಸಚಿವ ಪ್ರಿಯಾಂಕ್ ಖರ್ಗೆ ಮನೆ ಮುತ್ತಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ನೈತಿಕತೆಯಿಲ್ಲ. ಯಾವ ಆಧಾರದ ಮೇಲೆ ರಾಜಿನಾಮೆ ಕೇಳುತ್ತಿದ್ದಾರೆ..? ಖುದ್ದು ಪ್ರಿಯಾಂಕ್ ಅವರೇ ದಾಖಲೆ ಏನಾದರೂ ಇದ್ದರೆ ಕೊಡಿ ಎಂದಿದ್ದಾರೆ. ಈಶ್ವರಪ್ಪ ಕೇಸ್ ಬೇರೆ ಈ ಕೇಸ್ ಬೇರೆ. ಅಲ್ಲಿ ಖುದ್ದು ಈಶ್ವರಪ್ಪನವರ ಹೆಸರೇ ಬರೆದಿಟ್ಟಿದ್ದರು. ಈ ಕೇಸ್ನಲ್ಲಿ ಎಲ್ಲೂ ಯಾವ ದಾಖಲೆಯೂ ಇಲ್ಲ ಎಂದರು.