ಜೂ.21ರಂದು ನೂತನವಾಗಿ ನಿರ್ಮಿಸಿದ 10 ಮನೆಗಳ ಕೀ ಹಸ್ತಾಂತರ
ಸುಳ್ಯ: ಮಳೆಗಾಲದಲ್ಲಿ ಸದಾ ಭೂಕುಸಿತ ಮತ್ತಿತರ ಪ್ರಾಕೃತಿಕ ವಿಕೋಪ ಭೀತಿಯಿಂದ ಬವಣೆ ಅನುಭವಿಸಿದ್ದ ಕೇರಳ- ಕರ್ನಾಟಕ ಗಡಿ ಪ್ರದೇಶವಾದ ಕಮ್ಮಾಡಿಯ 10 ಕುಟುಂಬಗಳಿಗೆ ಸರಕಾರ ನಿರ್ಮಿಸಿದ 10 ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮ ಜೂ.21ರಂದು ನಡೆಯಲಿದೆ. ಪನತ್ತಡಿ ಪಂಚಾಯತ್ನ ಆರನೇ ವಾರ್ಡ್ನ ಕಲ್ಲಪಳ್ಳಿ ಬಾಟೋಳಿಯ ಪತ್ತುಕುಡಿ ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಪಂಗಡ ಪುನರ್ವಸತಿ ಮಿಷನ್ ಅಡಿಯಲ್ಲಿ 10 ಮನೆಗಳನ್ನು ನಿರ್ಮಿಸಲಾಗಿದೆ.
ಪನತ್ತಡಿ ಗ್ರಾಮ ಪಂಚಾಯತ್ನ ಆರನೇ ವಾರ್ಡ್ನಲ್ಲಿರುವ ಕಮ್ಮಾಡಿಯ ಕೆಲವು ಭಾಗಗಳು ನೈಸರ್ಗಿಕ ವಿಕೋಪ ಪೀಡಿತ ಪ್ರದೇಶವಾಗಿದ್ದು, ಪ್ರತಿ ಮಳೆಗಾಲದಲ್ಲಿ ಭೂ ಕುಸಿತ ಮತ್ತಿತರ ಪ್ರಾಕೃತಿಕ ವಿಕೋಪದಿಂದ ಇಲ್ಲಿನ ಜನರ ಜೀವನ ದುಸ್ತರವಾಗುತ್ತಿತ್ತು. ಆದುದರಿಂದ ಇಲ್ಲಿನ ಕುಟುಂಬಗಳನ್ನು ಕಲ್ಲಪಳ್ಳಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ಈ ಪ್ರದೇಶದಿಂದ 10 ಪರಿಶಿಷ್ಟ ಪಂಗಡದ ಕುಟುಂಬಗಳನ್ನು ಕಲ್ಲಪಳ್ಳಿಗೆ ಸ್ಥಳಾಂತರಿಸಲು ನಿರ್ಧರಿಸಿ ಅವರಿಗೆ 6 ಸೆಂಟ್ಸ್ ಭೂಮಿಯನ್ನು ಒದಗಿಸಿ, ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯ ವತಿಯಿಂದ ಮನೆ ನಿರ್ಮಾಣಕ್ಕಾಗಿ ತಲಾ 6 ಲಕ್ಷ ರೂ. ಗಳನ್ನು ಮಂಜೂರು ಮಾಡಿ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಿತು. ಇದೀಗ ಪೂರ್ಣಗೊಂಡಿರುವ ಹತ್ತು ಮನೆಗಳ ಕೀ ಹಸ್ತಾಂತರ ಕಾರ್ಯವನ್ನು ಜೂನ್ 21ರಂದು ಕೇರಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವರಾದ ಓ. ಆರ್. ಕೇಳು ನೆರವೇರಿಸಲಿದ್ದಾರೆ. ಕಾಞಂಗಾಡ್ ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕಾಸರಗೋಡು ಸಂಸದ ಶ್ರೀ ರಾಜಮೋಹನ್ ಉಣ್ಣಿತ್ತಾನ್, ಜಿಲ್ಲಾಧಿಕಾರಿ ಇಂಬಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿಯ ಸಂಚಾಲಕರು ಹಾಗೂ ಪನತ್ತಡಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕಲ್ಲಪಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರಿನ ಯೋಜನೆಗೆ 10 ಲಕ್ಷ: ಇಲ್ಲಿ ಕುಡಿಯುವ ನೀರಿನ ಯೋಜನೆಗೆ ಪರಪ್ಪ ಬ್ಲಾಕ್ ಪಂಚಾಯತ್ 10 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಕುಡಿಯುವ ನೀರಿನ ಯೋಜನೆ ಪೂರ್ತಿಯಾಗಿದೆ. 21ರಂದು ನಡೆಯುವ ಸಮಾರಂಭದಲ್ಲಿ ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ತಿಳಿಸಿದ್ದಾರೆ.