ಧಾರವಾಡ: ತಮಿಳುನಾಡಿನಲ್ಲಿ ನಡೆದ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಷಿಪ್ನ ಹಿರಿಯರ(೮೭ಕೆ.ಜಿ.) ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಅಶೋಕ ಮಾಕಣ್ಣವರ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.
ಪದಕದೊಂದಿಗೆ ಗ್ರಾಮಕ್ಕೆ ಬಂದ ಕುಸ್ತಿಪಟು ಅಶೋಕನನ್ನು ವಾದ್ಯಮೇಳದೊಂದಿಗೆ ಸ್ವಾಗತಿಸಿದ ಗ್ರಾಮಸ್ಥರು, ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡುವ ಮೂಲಕ ಸಾಧನೆಗೆ ಪ್ರೋತ್ಸಾಹ ನೀಡಿದರು. ಗ್ರಾಮ ಪಂಚಾಯ್ತಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ ಮಡಿವಾಳಪ್ಪ ದಿಂಡಲಕೊಪ್ಪ ಮಾತನಾಡಿ, ಇದು ಉಳಿದವರಿಗೆ ಸ್ಫೂರ್ತಿ ಆಗಬೇಕು. ಅಶೋಕನ ಸಾಧನೆಯ ಹಿಂದೆ ಪರಿಶ್ರಮ ಇದೆ. ಅವರ ತಂದೆ-ತಾಯಿಯ ಪ್ರೋತ್ಸಾಹವಿದೆ. ಈ ರೀತಿಯ ಸಾಧನೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಇವರು ನಮ್ಮೂರಿನ ಜತೆ ಕರ್ನಾಟಕದ ಕೀರ್ತಿ ತಂದಿದ್ದಾರೆ ಎಂದು ಬಣ್ಣಿಸಿದರು.
ಪರಮೇಶ್ವರ ಕೋಯಪ್ಪನವರ, ಶಶಿಮೌಳಿ ಕುಲಕರ್ಣಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಗಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಭೀಮವ್ವ ತೋಟಣ್ಣವರ, ಪಾರವ್ವ ಗದಗಯ್ಯ ಹಿರೇಮಠ, ಶಿವಾನಂದ ಬೆಂಡಿಗೇರಿ, ಮಂಜುನಾಥ ಬಂಡೆಪ್ಪನವರ, ಲಕ್ಷ್ಮೀ ಹುಲಮನಿ, ವಿಜಯಾ ವಾಲೀಕಾರ, ಗಂಗಾಧರ ಮುಮ್ಮಿಗಟ್ಟಿ, ಶೇಖಣ್ಣ ಕುಂಬಾರ, ಶಿವಾನಂದ ನಾಗಣ್ಣವರ, ಶ್ರೀಶೈಲ ಗೆದ್ದಿಕೇರಿ ಮೊದಲಾದವರಿದ್ದರು.