ಪತ್ನಿ ಶೀಲ ಶಂಕಿಸಿ ಕೊಲೆ

ಹೂವಿನಹಡಗಲಿ: ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಪತ್ನಿಯ ಶೀಲ ಶಂಕಿಸಿ ಪತಿ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಜರುಗಿದೆ.
ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹಾಲಮ್ಮ(೩೫) ಕೊಲೆಯಾದವರು. ಈಕೆಯ ಪತಿ ಮಲ್ಲೇಶ ಕೊಲೆ ಆರೋಪಿ. ಹಾವೇರಿ ತಾಲೂಕು ಶಾಕಾರ ಗ್ರಾಮದ ಮಲ್ಲೇಶ, ಬೀರಬ್ಬಿಯ ಹಾಲಮ್ಮ ೧೨ ವರ್ಷಗಳ ಹಿಂದೆ ಮದುವೆಯಾಗಿದ್ದರು. ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಕಾರಣಕ್ಕೆ ತವರೂರಿನಲ್ಲೇ ವಾಸವಾಗಿದ್ದರು. ಈ ದಂಪತಿಗೆ ಒಂದು ಗಂಡು ಮಗುವಿದೆ. ಇಬ್ಬರ ನಡುವೆ ಅನಗತ್ಯವಾಗಿ ಜಗಳ ನಡೆಯುತಿತ್ತು ಎನ್ನಲಾಗಿದ್ದು, ಬುಧವಾರ ಬೆಳಗ್ಗೆ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.