ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊಡಮಾಡುವ ‘ಮುಖ್ಯಮಂತ್ರಿ ಪದಕ’ಕ್ಕೆ ಜಿಲ್ಲೆಯಿಂದ 12 ಪೊಲೀಸರು ಆಯ್ಕೆಯಾಗಿದ್ದಾರೆ.
2024-25ನೇ ಸಾಲಿನ ಮುಖ್ಯಮಂತ್ರಿಯವರ ಪದಕಕ್ಕೆ ರಾಜ್ಯದ 197 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭಾಜನರಾಗಿದ್ದು, ಜಿಲ್ಲೆಯಿಂದ 8 ಹಿರಿಯ ಪೋಲಿಸ್ ಅಧಿಕಾರಿಗಳು ಹಾಗೂ 4 ಹಿರಿಯ ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ.
ನ್ಯಾಮತಿಯ ಎಸ್ಬಿಐ ದರೋಡೆ ಮಾಡಿದ್ದ ಡಕಾಯಿತರನ್ನು ದರೋಡೆ ನಡೆದ ಆರು ತಿಂಗಳಲ್ಲಿ ಪ್ರಕರಣ ಭೇದಿಸಿ ಸುಮಾರು 15.30 ಕೋಟಿ ಮೌಲ್ಯದ 17.7 ಕೆಜಿ ಚಿನ್ನಾಭರಣ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ತಂಡದ ಹತ್ತು ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು, ಉತ್ತಮ ಕಾರ್ಯನಿರ್ವಹಿಸಿದ್ದ ಉಳಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 12 ಜನರಿಗೆ ಸಿಎಂ ಪದಕ ಲಭಿಸಿದಂತಾಗಿದೆ.
ದಾವಣಗೆರೆ ಜಿಲ್ಲೆಯ ಸಿಎಂ ಪದಕ ಪಡೆದವರ ವಿವರ:
ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಸ್ಯಾಮ್ ವರ್ಗೀಸ್, ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್, ನ್ಯಾಮತಿ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಎನ್.ಎಸ್. ರವಿ, ಕೆಟಿಜೆ ನಗರ ಪೊಲೀಸ್ ಠಾಣೆ ಪಿಎಸ್ಐ ಸಾಗರ್ ಅತ್ತರವಾಲ್, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಮಂಜಪ್ಪ ಕುಪ್ಪೇಲೂರು, ಹೊನ್ನಾಳಿ ಪೊಲೀಸ್ ಠಾಣೆ ಪಿಎಸ್ಐ ಸಂಜೀವ್ ಕುಮಾರ್, ಪೂರ್ವ ವಲಯ ಕಚೇರಿಯ ಹೆಡ್ ಕಾನ್ಸಟೇಬಲ್ ಎಂ.ಪಿ. ರಮೇಶ್, ನ್ಯಾಮತಿ ಪೊಲೀಸ್ ಠಾಣೆ ಶಿವರಾಜ್, ಡಿ.ಸಿ.ಆರ್.ಬಿ ಘಟಕದ ಹೆಡ್ ಕಾನ್ಸಟೇಬಲ್ ರಾಘವೇಂದ್ರ, ಕೆ.ಟಿ. ಆಂಜನೇಯ ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಇ.ವೈ. ಕಿರಣ್ ಕುಮಾರ್, ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಇವರುಗಳು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು, ಏಪ್ರಿಲ್ 2ರಂದು ಪದಕ ಪ್ರದಾನ ಮಾಡಲಾಗುತ್ತದೆ.

























