ತುಮಕೂರು: ಜಿಲ್ಲಾಸ್ಪತ್ರೆಯಲ್ಲಿರುವ ಅಪಘಾತ ತುರ್ತು ಚಿಕಿತ್ಸಾ ಕೇಂದ್ರ, ಡಯಾಲಿಸಿಸ್ ಘಟಕ, ಹೆರಿಗೆ ವಾರ್ಡ್, ಮಕ್ಕಳ ವಾರ್ಡ್, ತೀವ್ರ ನಿಗಾ ಘಟಕ ಸೇರಿ ವಿವಿಧ ವಾರ್ಡ್ಗಳಿಗೆ ಲೋಕಾಯುಕ್ತ ಬಿ.ಎಸ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಂಗವಿಕಲರ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ರೋಗಿಗಳಿಗೆ ಎಲ್ಲ ಔಷಧಿಗಳನ್ನು ಉಚಿತವಾಗಿ ಆಸ್ಪತ್ರೆಯಲ್ಲೇ ವಿತರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ನಂತರ ಮುಖ್ಯ ಔಷಧಿ ಉಗ್ರಾಣಕ್ಕೆ ಭೇಟಿ ನೀಡಿ, ಔಷಧಿ ಸಂರಕ್ಷಣೆ, ವಿತರಣೆಗೆ ಸಂಬಂಧಿಸಿದಂತೆ ನೋಂದಣಿ ಪುಸ್ತಕಗಳನ್ನು ಪರಿಶೀಲಿಸಿದರು.
ಹಾವು ಕಡಿತಕ್ಕೆ ಒಳಗಾದವರಿಗೆ ನೀಡುವ ಔಷಧಿ ಸಂಗ್ರಹಣೆ ಬಗ್ಗೆ ಮಾಹಿತಿ ಪಡೆದು, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಔಷಧಿ ಸಂಗ್ರಹ ಮಾಡಬೇಕು ಎಂದು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಔಷಧಿಗಳನ್ನು ಹೊರಗಡೆಯಿಂದ ತರಲು ಸೂಚಿಸಬಾರದು. ಒಂದು ವೇಳೆ ಔಷಧಿಗಳನ್ನು ಹೊರಗಡೆಯಿಂದ ತರಿಸುವ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹೆರಿಗೆ ವಾರ್ಡ್, ಮಕ್ಕಳ ವಾರ್ಡ್, ತೀವ್ರ ನಿಗಾ ಘಟಕ ಸೇರಿ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ರೋಗಿಗಳ ವಿವರ, ಔಷಧಿ ವಿತರಣೆ, ಹಾಜರಾತಿಗಳ ಪರಿಶೀಲನೆ ನಡೆಸಿದರು.