ಜಾತಿ ಜನಗಣತಿ ಅನುಷ್ಠಾನ ಒಪ್ಪಲ್ಲ

ದಾವಣಗೆರೆ: ಜಾತಿ ಜನಗಣತಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ತಳೆದಿರುವ ನಿಲುವಿಗೆ ನಾನೂ ಬದ್ಧನಾಗಿದ್ದೇನೆ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕದ ಹಿಂದೆ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಜನಗಣತಿ) ಸಾಕಷ್ಟು ಗೊಂದಲದಿಂದ ಕೂಡಿದೆ. ಇದನ್ನು ಯಾವುದೇ ಕಾರಣಕ್ಕೂ ನಾನು ಒಪ್ಪುವುದಿಲ್ಲ. ಸರ್ಕಾರ ವರದಿ ಹೊರ ತರುವುದಕ್ಕೂ ಮುನ್ನ ಚರ್ಚಿಸಬೇಕಿತ್ತು. ವರದಿ ಬಿಡುಗಡೆಗೊಳಿಸಿ ತಿದ್ದುಪಡಿಗೆ ಮುಂದಾದರೆ ಸರ್ಕಾರಕ್ಕೆ ಮುಜುಗರವಾಗಲಿದೆ ಎಂದರು.
ಸಾದರ ಲಿಂಗಾಯತ ಸಮಾಜ ೬೭ ಸಾವಿರ ಜನಸಂಖ್ಯೆ ಹೊಂದಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲೇ ಅಂದಾಜು ೬೦ ಸಾವಿರ ಸಾದರ ಲಿಂಗಾಯತ ಸಮುದಾಯವಿದೆ. ಯಾವ ರೀತಿಯಲ್ಲಿ ಗಣತಿ ಮಾಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯ ೧.೨೫ ಕೋಟಿ ಇದೆ. ಯಾವ ಜಾತಿಯ ಜನರ ಸಂಖ್ಯೆ ಎಷ್ಟಿದೆ ಎಂಬುದನ್ನು ಪಾರದರ್ಶಕವಾಗಿ ನೀಡಿದರೆ ಅನುಕೂಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.