ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ನಡೆದು ಕೊಳ್ಳುತ್ತಿದ್ದೀರಿ

0
11

ರಾಜ್ಯದ ನೈತಿಕ ರಾಜಕಾರಣದ ಪರಂಪರೆಯ ಘನತೆ ಕುಗ್ಗದಂತೆ ನಡೆದುಕೊಳ್ಳಿ,

ಬೆಂಗಳೂರು: ಅಧಿಕಾರಕ್ಕೆ ಅಂಟಿಕೊಂಡು ಕುಳಿತ ಭಂಡ ಮುಖ್ಯಮಂತ್ರಿ ಎಂಬ ಕಪ್ಪು ಚುಕ್ಕೆಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಸಿದ ಐತಿಹಾಸಿಕ ಪ್ರಮಾದಕ್ಕೆ ಕಾರಣರಾಗಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸಿದ್ದರಾಮಯ್ಯನವರೇ, ಮುಡಾ ಹಗರಣದ ವಿಚಾರವಾಗಿ ನಿಮ್ಮ ವಿರುದ್ಧ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಹೈಕೋರ್ಟ್‌ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶ ನೀಡಿದೆ. ಘನತೆವೆತ್ತ ರಾಜ್ಯ ಪಾಲರನ್ನು ಪಕ್ಷಪಾತಿಗಳೆಂದು ಜರಿದಿರಿ, ಅದಕ್ಕೆ ಘನ ಉಚ್ಚ ನ್ಯಾಯಾಲಯವೇ ನಿನ್ನೆ ಉತ್ತರಕೊಟ್ಟಿತು, ನಿಮ್ಮ ಮೇಲಿನ ಆರೋಪದಲ್ಲಿ ಹುರಳಿದೆ ಎಂಬುದನ್ನೂ ಉಲ್ಲೇಖಿಸಿತು. ಇಂದು ನಿಮ್ಮನ್ನು ಆರೋಪಿಯನ್ನಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಎರಡೂ ನ್ಯಾಯಾಲಯಗಳ ತೀರ್ಪುಗಳು ನೀವು ತಪ್ಪಿತಸ್ಥರೆಂಬ ಭಾವ ರಾಜ್ಯದ ಜನತೆಯಲ್ಲಿ ಮೂಡಲು ಪೂರಕವಾಗಿವೆ.ಇಷ್ಟಾಗಿಯೂ ‘ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬಂತೆ ನಡೆದು ಕೊಳ್ಳುತ್ತಿದ್ದೀರಿ, ಈಗಾಗಲೇ ಕಳಂಕದ ಕಪ್ಪುಮಸಿ ನಿಮ್ಮನ್ನು ಆವರಿಸಿಕೊಂಡಿದೆ ಇನ್ನಾದರೂ ರಾಜ್ಯದ ನೈತಿಕ ರಾಜಕಾರಣದ ಪರಂಪರೆಯ ಘನತೆ ಕುಗ್ಗದಂತೆ ನಡೆದುಕೊಳ್ಳಿ, ಆರೋಪ ಕೇಳಿಬಂದ ತಕ್ಷಣ ಅಧಿಕಾರ ತ್ಯಜಿಸಿ ನೈತಿಕತೆ ಮೆರೆದ ರಾಜಕೀಯ ಧುರೀಣರ ಉದಾಹರಣೆಗಳು ಇತಿಹಾಸದ ಪುಟದಲ್ಲಿದೆ, ಟೆಲಿಪೋನ್ ಕದ್ದಾಲಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಮಕೃಷ್ಣ ಹೆಗಡೆಯವರ ಆದರ್ಶದ ನೆರಳಿನಲ್ಲಿ ಅಧಿಕಾರದ ಸವಿಯುಂಡವರು ತಾವು ಎಂಬುದನ್ನು ಮರೆತಂತೆ ವರ್ತಿಸಬೇಡಿ.

ಹಗರಣದ ಆರೋಪ ಹೊತ್ತು ನ್ಯಾಯಾಲಯದಲ್ಲಿ ಆರೋಪಿ ಎಂಬ ತೀರ್ಪು ಬಂದರೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತ ಭಂಡ ಮುಖ್ಯಮಂತ್ರಿ ಎಂಬ ಕಪ್ಪು ಚುಕ್ಕೆಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಸಿದ ಐತಿಹಾಸಿಕ ಪ್ರಮಾದಕ್ಕೆ ಕಾರಣರಾಗಬೇಡಿ, ನಿಮ್ಮ ಭಂಡತನದ ನಡೆಯನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸಲಾರರು. ‘ನೈತಿಕತೆಯ ರಾಜಕೀಯವನ್ನು’ ಎಂದೋ ಮೂಲೆಗೆ ಸರಿಸಿರುವ ಕಾಂಗ್ರೆಸ್ ಹೈಕಮಾಂಡ್ ತನ್ನ ಅಜೆಂಡ ಏನಿದ್ದರೂ ಭ್ರಷ್ಟರನ್ನು ರಕ್ಷಿಸುವುದು, ದೇಶದ ಕಾನೂನನ್ನು ಉಲ್ಲಂಘಿಸುವವರನ್ನು ಉತ್ತೇಜಿಸುವುದೇ ತಮ್ಮ ಆದ್ಯತೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದಲ್ಲೂ ತೋರಿಸಿಕೊಟ್ಟಿದೆ ಎಂದಿದ್ದಾರೆ.

Previous articleಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವು
Next articleಸಿದ್ದರಾಮಯ್ಯ ವಿರುದ್ಧ ಹರಿಯಾಣದಲ್ಲೂ ಹರಿಹಾಯ್ದ ಮೋದಿ