ಕೊಪ್ಪಳ: ಕಳೆದ ವರ್ಷದ ಸಂಕಲ್ಪದಂತೆ ಶ್ರೀಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಪೂರ್ಣಗೊಂಡ ಕಟ್ಟಡವು ನಿರ್ಮಾಣಗೊಂಡಿದ್ದು, ಇದನ್ನು ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಲೋಕಾರ್ಪಣೆ ಗೊಳಿಸುವರು.
ನಗರದ ಗವಿಮಠದ ಮೈದಾನದಲ್ಲಿ ಜುಲೈ ೧ರಂದು ಬೆಳಿಗ್ಗೆ ೧೦ಕ್ಕೆ ನಡೆಯುವ ಶ್ರೀಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಪೂರ್ಣಗೊಂಡ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ದಾನಚಿಂತಾಮಣಿ ಖ್ಯಾತಿಯ ರಾಜ್ಯೋತ್ಸವ ಪುರಸ್ಕೃತೆ ಹುಚ್ಚಮ್ಮ ಸಾಥ್ ನೀಡುವರು.
ತ್ರಿವಿಧ ದಾಸೋಹಿ ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ಶ್ರೀಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿ ಸಾನ್ನಿಧ್ಯ ವಹಿಸುವರು. ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.