ಕೊರಳಲ್ಲಿನ ಚಿನ್ನದ ಸರ ಎಗರಿಸಿದ ಚಾಲಾಕಿ ಕಳ್ಳ

0
137

ಇಳಕಲ್ : ಮಹಿಳೆಯೊಬ್ಬಳು ಅಟೋ ಮೊಬೈಲ್ ಅಂಗಡಿಯಲ್ಲಿ ನಿತ್ಯದ ವ್ಯವಹಾರ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಬೈಕ್ ಮೇಲೆ ಬಂದ ಕಳ್ಳರು ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿಕೊಂಡು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬಸಮ್ಮ ಕರ್ಲಿ ಎಂಬ ಮಹಿಳೆ ಅಂಗಡಿಯಲ್ಲಿನ ಕೆಲಸ ಮುಗಿಸಿ ಮರಳಿ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ಮೇಲೆ ಬಂದ ಚಾಲಾಕಿ ಕಳ್ಳ ಅವರ ಕೊರಳಿಗೆ ಕೈ ಹಾಕಿ ೧೫ ಗ್ರಾಮ ತೂಕದ ಚಿನ್ನದ ಸರವನ್ನು ಲಪಟಾಯಿಸಿದ್ದಾನೆ, ಒಂದು ಕ್ಷಣ ಏನಾಗುತ್ತಿದೆ ಎಂಬ ಅರಿವು ಕೂಡ ಬಾರದಂತೆ ಕಳ್ಳನ ಕರಾಮತ್ತು ನಡೆದಿದೆ. ಮಾರುತಿ ನಗರದ ತಮ್ಮ ಮನೆಗೆ ಹೋಗುವ ಮಾರ್ಗದಲ್ಲಿ ಡಾ ಸಂತೋಷ ಪೂಜಾರಿ ಆಸ್ಪತ್ರೆಯ ಬಳಿ ಈ ಘಟನೆ ನಡೆದಿದೆ. ಕಳ್ಳ ಚಾಕು ಚೂರಿಯಿಂದ ಏನಾದರೂ ಚುಚ್ಚಿ ಗಾಯಗೊಳಿಸಿದ್ದರೆ ಏನು ಪರಿಸ್ಥಿತಿ ಎಂಬ ಆತಂಕ ಅವರ ಮಾತಿನಲ್ಲಿ ಅಡಗಿತ್ತು
ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ ಐ ಷಹಜಹಾನ ನಾಯಕ ತನಿಖೆ ನಡೆಸುತ್ತಿದ್ದಾರೆ. ದರ್ಗಾ ಹತ್ತಿರದ ಸಿಸಿ ಕ್ಯಾಮರಾದಲ್ಲಿ ವೀಕ್ಷಣೆ ಮಾಡಿದಾಗ ದರ್ಗಾದಿಂದಲೇ ಬಸಮ್ಮ ಕರ್ಲಿಯವರ ಹಿಂದೆ ಬೈಕ್ ಮೇಲೆ ಕಳ್ಳರು ಬರುತ್ತಿರುವದು ಮತ್ತು ತಲೆಗೆ ಹೆಲ್ಮೆಟ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವದು ಕಾಣುತ್ತಿದೆ.