ಮೂಡಿಗೆರೆ: ತಾಲೂಕಿನ ಕಮ್ಮರಗೋಡು ಗ್ರಾಮದಲ್ಲಿ ಭಾನುವಾರ ಕಾಡಾನೆ ಕೃಷಿ ಹೊಂಡದಲ್ಲಿ ಈಜಾಡುತ್ತಾ ಸುಮಾರು ಒಂದು ಗಂಟೆ ಕಾಲ ತುಂಟಾಟ ನಡೆಸಿದೆ.
ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ, ಅರಣ್ಯದಿಂದ ಹೊರಬಂದ ಕಾಡಾನೆ ಕೃಷಿ ಹೊಂಡದಲ್ಲಿ ನೀರಾಡುತ್ತಿರುವ ದೃಶ್ಯವನ್ನು ಕಂಡ ಗ್ರಾಮಸ್ಥರು ಮೊದಲು ಭಯಗೊಂಡರೂ, ನಂತರ ಕಾಡಾನೆಯ ವರ್ತನೆ ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.
ಕಾಡಾನೆ ಹೊಂಡದ ನಡು ಭಾಗದಲ್ಲಿ ನೀರಿನಲ್ಲಿ ಈಜಾಡುತ್ತಾ, ಸೊಂಡಿಲಿನಿಂದ ನೀರು ಎಸೆದು ಆಟ ವಾಡುತ್ತಿತ್ತು ಎನ್ನಲಾಗಿದೆ. ಈ ದೃಶ್ಯವನ್ನು ಕೆಲವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದರು.
ಸುದ್ದಿ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಜನರನ್ನು ಸುರಕ್ಷಿತ ದೂರಕ್ಕೆ ಕಳುಹಿಸಿ, ಕಾಡಾನೆಯನ್ನು ಮರಳಿಸಲು ಕ್ರಮ ಕೈಗೊಂಡರು. ಕೆಲವೇ ಸಮಯದಲ್ಲಿ ಕಾಡಾನೆ ಹತ್ತಿರದ ಕಾಡಿನೊಳಗೆ ಹಿಂದಿರುಗಿದೆ.
ಗ್ರಾಮದ ಜನರ ಪ್ರಕಾರ ಇತ್ತೀಚೆಗೆ ಹತ್ತಿರದ ಅರಣ್ಯದಿಂದ ಕಾಡಾನೆಗಳು ಊರಿನಲ್ಲಿ ಕಾಣಿಸಿಕೊಳ್ಳುವ ಘಟನೆಗಳು ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಇವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.