ಹುಬ್ಬಳ್ಳಿ: ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ದಾಳ ಉರುಳಿಸುತ್ತಿದ್ದಾರೆ ಎಂದು ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಕ್ಷೇಮದ ಬಗ್ಗೆ ವಿಚಾರ ಮಾಡಬೇಕಾದ ಸಿದ್ದರಾಮಯ್ಯ ಕೇವಲ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಜಾತಿ ಜನಗಣತಿ ವಿಚಾರದಲ್ಲಿ ಅವರಲ್ಲಿಯೇ ಒಗ್ಗಟ್ಟಿಲ್ಲ. ಹಾಗಿದ್ದರೂ
ಸಾಧಕ- ಬಾಧಕಗಳ ಅರಿವಿಲ್ಲದೇ ಸಚಿವ ಸಂಪುಟದಲ್ಲಿ ಜಾತಿ ಜನಗಣತಿ ವರದಿ ಮಂಡಿಸಲಾಗುತ್ತಿದೆ.
ಪರ್ಸೆಂಟೇಜ್ ವಿಚಾರದಲ್ಲಿ ಗುತ್ತಿಗೆದಾರರ ಆರೋಪದ ಬಗ್ಗೆ ಮಾತನಾಡಿದ ಅವರು, ಗುತ್ತಿಗೆದಾರರು ನಮ್ಮ ಸರ್ಕಾರವನ್ನ ತೆಗೆದರು. ಈಗ ಅವರನ್ನೇ ಕಾಂಗ್ರೆಸ್ ತೆಗೆಯುತ್ತಿದೆ. ಸಿದ್ದರಾಮಯ್ಯ ಅವರ ಜೊತೆ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಹಳೇಯ ಸಿದ್ದರಾಮಯ್ಯ ಇವರಲ್ಲ. ಈಗಿನ ಸಿದ್ದರಾಮಯ್ಯ ಯಾರು ಅಂತ ನನಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಜನಾಕ್ರೋಶ ಯಾತ್ರೆಗೆ, ಕಾಂಗ್ರೆಸ್ ಪ್ರತಿಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಇಂತಹ ತಂತ್ರಗಾರಿಕೆಯಲ್ಲಿ ಮಾಸ್ಟರ್. ಮೇಲಾಗಿ ಕಾಂಗ್ರೆಸ್ನವರಿಗೆ ಮಾಡಲು ಏನು ಕೆಲಸ ಇದೆ. ಅವರದ್ದು ದುಡ್ಡಿಲ್ಲದೇ ದುಕಾನ್ ಬಂದ್ ಆಗಿದೆ. ಬಂದ್ ಆಗಿರುವಂತ ದುಕಾನ್ ಯಾವ ರೀತಿ ಹೇಳಿಕೊಳ್ಳಕಾಗುತ್ತೆ. ಗೊತ್ತು ಗುರಿ ಇಲ್ಲದೆ ಕೆಲವು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಎರಡು ವರ್ಷದಲ್ಲೇ ಜನ ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರು, ಜಾನುವಾರು ರೋಗ, ರೈತರ ಬಗ್ಗೆ ಕಾಳಜಿ ಬಿಟ್ಟು ಜನರನ್ನ ಡೈವರ್ಟ್ ಮಾಡುತ್ತಿದ್ದಾರೆ. ಅವರದೇ ಆದ ಮೈಂಡ್ ಅನ್ನು ಇಟ್ಟುಕೊಂಡು ಜನರನ್ನ ಡೈವರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.