ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪದ ಸಾಮ್ರಾಟ್ ಮೈದಾನದಲ್ಲಿ ರವಿವಾರ ಸಂಜೆ ಕೇರಳದ ವಯನಾಡಿನ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಎಂಬವರನ್ನು ಥಳಿಸಿ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಕೊಣಾಜೆ, ಬರ್ಕೆ, ಕಂಕನಾಡಿ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾರಿ ಮುಸ್ಲಿಂ ಆರ್ಮಿ ಎಂಬ ವಾಟ್ಸ್ಪ್ ಗ್ರುಪ್ನಲ್ಲಿ ಕುಡುಪು ಕೂಲಿ ಕಾರ್ಮಿಕನ ಹತ್ಯೆಗೆ ಬಳಸಿದ ಬ್ಯಾಟ್, ಸ್ಟಂಪ್ ಮತ್ತು ಮಾರಕಾಸ್ತ್ರ ಕಾಣೆಯಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ? ಎಂದು ಪೋಸ್ಟ್ ಮಾಡಿ ಸುಳ್ಳು ವದಂತಿ ಹಬ್ಬಿಸಿದ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾರಿ ರಾಯಲ್ ನವಾಬ್ ಇನ್ಸ್ಟಾಗ್ರಾಮ್ನಲ್ಲಿ ಸುಳ್ಳು ಮಾಹಿತಿ ಹಾಕಿದವರ ಮೇಲೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಕಾಲ್ತೊ ಬ್ಯಾರಿ ಗ್ರುಪ್ನಲ್ಲಿ ಸುಳ್ಳು ಸುದ್ದಿ ಹಬ್ಬಿದ ಆರೋಪದ ಮೇರೆಗೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಝಾಕಿರ್ ಹುಸೇನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.