ದಾವಣಗೆರೆ: ನಗರದ ರಾಮ್ ಅಂಡ್ ಕೋ ವೃತ್ತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾಮಣ್ಣನ ದಹನ ಮಾಡುವ ಮೂಲಕ ನಾಳೆ ನಡೆಯಲಿರುವ ಹೋಳಿಗೆ ಅಧಿಕೃತವಾಗಿ ಚಾಲನೆ ನೀಡಿ ಸಂಭ್ರಮಿಸಿದರು.
ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಶ್ರೀ ಸಿದ್ದಿವಿನಾಯಕ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕಾಮಣ್ಣನ ದಹನ ಕಾರ್ಯಕ್ರಮದಲ್ಲಿ ಮೊದಲು ಕಟ್ಟಿಗೆ ಜೋಡಿಸಿ, ಅದರ ಮಧ್ಯೆ ಕಾಮಣ್ಣನ ಫೋಟೋವನ್ನು ಇರಿಸಿ ಅಗ್ನಿ ಸ್ಪರ್ಶ ಮಾಡಲಾಯಿತು. ಇನ್ನು ಅಗ್ನಿಸ್ಪರ್ಶ ಮಾಡುವ ಮೊದಲು ಇಡೀ ಅಕ್ಕಿ ಆ ಕಾಮಣ್ಣನ ಸುತ್ತ ಹಾಕಲಾಯಿತು. ಅಲ್ಲದೇ ಬಾಯಿ ಬಡಿದುಕೊಂಡು ಕಾಮಣ್ಣನ ಮಕ್ಕಳೇ ಎಂದು ಕೂಗುವ ಮೂಲಕ ಕಾಮಣ್ಣನ ದಹನ ಮಾಡಲಾಯಿತು.
ಈ ಮೊದಲು ಕಾಮಣ್ಣನ ದಹನ ಮಾಡಲು ಒಬ್ಬರು ದಹನ ಮಾಡಿದ ಅಗ್ನಿಯನ್ನು ಕದ್ದು ತಂದು ಅಗ್ನಿ ಸ್ಪರ್ಶ ಮಾಡಿದರು. ಈ ಸಂದರ್ಭದಲ್ಲಿ ಕಾಮಣ್ಣನ ದಹನ ವೀಕ್ಷಿಸಲು ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ಇದೇ ರೀತಿ ವಿನೋಬನಗರ, ಎಂಸಿಸಿ ಎ ಮತ್ತು ಬಿ ಬ್ಲಾಕ್, ವಿದ್ಯಾನಗರ, ಕೆ.ಬಿ.ಬಡಾವಣೆ, ಪಿ.ಜೆ. ಬಡಾವಣೆ ಸೇರಿದಂತೆ ನಗರದ ವಿವಿಧ ಬಡಾವಣೆಗಳ ಬೀದಿಯಲ್ಲಿ ಕಾಮಣ್ಣನ ದಹನ ಮಾಡುವ ಮೂಲಕ ಸಂಭ್ರಮಿಸಿದರು. ದುಷ್ಟಶಕ್ತಿ ನಿಗ್ರಹ ಹಾಗೂ ಶಿಷ್ಟಜನರ ಉದ್ಧಾರ, ಮಳೆ, ಬೆಳೆ ಸಮೃದ್ಧಿಗಾಗಿ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.