ಉಡುಪಿ: ನಾನು ದಿ. ಡಾ.ವಿಎಸ್.ಆಚಾರ್ಯ ಅವರನ್ನು ಕೊನೆಯವರೆಗೂ ಗೌರವಿಸಿದ್ದೇನೆ. ಅವರಿಂದ ಅನೇಕ ವಿಚಾರಗಳನ್ನು ಕಲಿತಿದ್ದೇನೆ. ಆದರೆ, ಉಡುಪಿಯಲ್ಲಿ ಇದುವರೆಗೂ ಯಾವ ಶಾಸಕರೂ ದ್ವೇಷ ರಾಜಕಾರಣ ಮಾಡಿಲ್ಲ. ಆದರೆ, ಪ್ರಸ್ತುತ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರ ದ್ವೇಷದ ರಾಜಕಾರಣ ಉಡುಪಿಗೆ ಒಳಿತಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾಂಗ್ರೆಸ್ ಶಾಸಕರಾಗಿದ್ದ ಯು.ಆರ್. ಸಭಾಪತಿ ಮತ್ತು ಪ್ರಮೋದ್ ಮಧ್ವರಾಜ್ ಅವರನ್ನು ರಾಜಕೀಯವಾಗಿ ಎದುರಿಸಿದ್ದೇನೆ. ನಾವೆಲ್ಲ ರಾಜಕೀಯವಾಗಿ ಜಗಳ ಮಾಡುತ್ತಿದ್ದೆವು. ಆದರೆ ನಾವು ಯಾರೂ ವೈಯಕ್ತಿಕವಾಗಿ ನಿಂದನೆ ಹಾಗೂ ವ್ಯವಹಾರಕ್ಕೆ ತೊಂದರೆ ಮಾಡುತ್ತಿರಲಿಲ್ಲ ಎಂದರು.
ಉಡುಪಿ ಶಾಸಕರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವ ಬಗ್ಗೆ ನೂರಕ್ಕೆ ನೂರರಷ್ಟು ಬೇಸರವಿದೆ. ನಾನು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ದ್ವೇಷದ ರಾಜಕಾರಣ ಮುಖ್ಯ ಕಾರಣ. ಟ್ರಾಫಿಕ್ ಯೋಜನೆಯನ್ನು ನನ್ನ ಯೋಜನೆ ಎಂಬ ಕಾರಣಕ್ಕೆ ರದ್ದು ಮಾಡಿದ್ದಾರೆ. ಯಾವುದೇ ಕೃತಜ್ಞತೆ ಇರುವ ವ್ಯಕ್ತಿ ಈ ರೀತಿ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಆದರೆ, ನಾನು ಪಕ್ಷದಲ್ಲಿ ಇರುವಾಗ ಯಶಪಾಲ್ ಸುವರ್ಣ ಹೇಗೆ ನಡೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಅವರು ನನ್ನ ವೈಯಕ್ತಿಕ ನಿಂದನೆ ಮತ್ತು ವ್ಯವಹಾರಕ್ಕೆ ತೊಂದರೆ ಮಾಡುತ್ತಿದ್ದಾರೆ ಎಂದು ಭಟ್ ಆರೋಪಿಸಿದರು.
ಯಶಪಾಲ್ ಸುವರ್ಣ ಅವರ ಬೆಳವಣಿಗೆಯಲ್ಲಿ ನನ್ನ ಪಾತ್ರ ಎಷ್ಟಿದೆ ಎಂಬುವುದು ಉಡುಪಿಯ ಜನತೆಗೆ ಗೊತ್ತಿದೆ. 2004ರಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿದಾಗ ಬಂಡಾಯ ಅಭ್ಯರ್ಥಿ ಸುಧಾಕರ ಶೆಟ್ಟಿ ಅವರಿಗೆ ಯಶಪಾಲ್ ಸುವರ್ಣ ಬೆಂಬಲಿಸಿದ್ದರು. ಆದರೆ, ಬೆತ್ತಲೆ ಪ್ರಕರಣದ ಆರೋಪಿಯಾಗಿದ್ದಾಗ ಬೆಂಬಲ ನೀಡಿ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿದ್ದೆ. ಬಳಿಕ ನಗರಸಭೆ ಸದಸ್ಯನಾಗಿ ನಾಮನಿರ್ದೇಶನ ಮಾಡಿದೆ. ಎರಡು ಬಾರಿ ನಗರಸಭೆ ಸದಸ್ಯನಾಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟೆ. ಅವರನ್ನು ಮೀನು ಮಾರಾಟ ಫೆಡರೇಶನ್ಗೆ ನಾಮನಿರ್ದೇಶನ ಮಾಡಿ ಅಧ್ಯಕ್ಷರನ್ನಾಗಿ ಮಾಡಿರುವುದು ನಾನು. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷನನ್ನಾಗಿ ಮಾಡಿದ್ದೆ. ಅವರ ಮೇಲೆ ವಿಶ್ವಾಸ ಇಟ್ಟುಕೊಂಡು ಪ್ರೀತಿಯಿಂದ ಬೆಳೆಸಿದ್ದೆ. ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ 40 ದಿನಗಳ ಕಾಲ ಅವರೊಂದಿಗೆ ಕೆಲಸ ಮಾಡಿದ್ದೆ ಎಂದರು.
ಇವತ್ತು ನಾನು ಬಿಜೆಪಿ ತೊರೆದು ಪಕ್ಷೇತರನಾಗಿ ಸ್ಪರ್ಧಿಸಲು ಯಶಪಾಲ್ ಅವರೇ ಕಾರಣ. ಅವರಿಂದ ನನಗೆ ಮಾನಸಿಕ ಆಘಾತ ಆಗಿರುವುದಲ್ಲದೆ, ಮನಸ್ಸಿಗೆ ತುಂಬಾ ಬೇಸರ ಆಗಿದೆ. ಮೂರು ಬಾರಿ ಶಾಸಕನಾಗಿದ್ದ ನನ್ನನ್ನು ಅವರು ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದವರು ನೊಂದು ನುಡಿದರು.
ಶಾಸಕರು ನನ್ನ ಬಗ್ಗೆ ಅವಹೇಳನವಾಗಿ ಮಾತನಾಡುತ್ತಾರೆ. ಇದು ಸಜ್ಜನ ಶಾಸಕರ ಲಕ್ಷಣವಲ್ಲ. ಈ ರೀತಿ ವರ್ತನೆ ಸರಿಯಲ್ಲ. ಅವರ ವೈಯಕ್ತಿಕ ಬೆಳವಣಿಗೆಯಲ್ಲಿ ನನ್ನ ಕೊಡುಗೆಯೂ ಇದೆ. ಮನುಷ್ಯ ಇಷ್ಟು ಕೃತಘ್ನನಾಗಬಾರದು. ಕೃತಜ್ಞತೆ ಸ್ವಲ್ಪವಾದರೂ ಇರಬೇಕು. ಉಡುಪಿಯ ರಾಜಕಾರಣದಲ್ಲಿ ಇಂಥ ರಾಜಕಾರಣ ಇರಲಿಲ್ಲ ಎಂದು ರಘುಪತಿ ಭಟ್ ಬೇಸರ ವ್ಯಕ್ತಪಡಿಸಿದರು.
ನನ್ನ ಅವಧಿಯಲ್ಲಿನ ಯೋಜನೆಗಳಿಗೆ ಇವರು ರಾಜಕೀಯ ಕಾರಣಕ್ಕಾಗಿ ತಡೆಯೊಡ್ಡುತ್ತಿರುವುದರಿಂದ ಉಡುಪಿಯ ಅಭಿವೃದ್ಧಿಗೆ ಬಹಳ ದೊಡ್ಡ ತೊಡಕಾಗಿದೆ ಎಂದ ರಘುಪತಿ ಭಟ್, ಮಹಾಲಕ್ಷ್ಮೀ ಬ್ಯಾಂಕಿಗೆ ಸಂಬಂಧಿಸಿ ಜನರ ಸಮಸ್ಯೆಯ ಬಗ್ಗೆ ಧ್ವನಿ ಎತ್ತಿದ್ದೇನೆಯೇ ಹೊರತು ಶಾಸಕರ ಬಗ್ಗೆ ಆರೋಪ ಮಾಡಿಲ್ಲ. ಅದು ಕೂಡಾ ಮಾಡಬಾರದು ಅಂದರೆ ಪಾಳೇಗಾರಿಕೆ ಆಗುತ್ತದೆ. ಅದನ್ನೇ ಇಟ್ಟುಕೊಂಡು ನನ್ನ ಸೊಸೈಟಿಯ ಬಗ್ಗೆ ವಿಧಾನಸಭೆಯಲ್ಲಿ ವಿವಾದ ಮಾಡಿದರು ಎಂದು ದೂರಿದರು.
ಮುಂದಿನ ಚುನಾವಣೆಗೆ ಸ್ಪರ್ಧೆ
ಬಿಜೆಪಿ ಕರೆದರೆ ಪಕ್ಷ ಸೇರ್ಪಡೆಯಾಗಲು ತಯಾರಿದ್ದೇನೆ. ಆದರೆ ಬಿಜೆಪಿ ನಾಯಕರು ಕರೆದಿಲ್ಲ, ನನ್ನ ಹತ್ತಿರ ಮಾತು ಕೂಡ ಆಡಿಲ್ಲ. ಈಗ ನನ್ನ ಆವಶ್ಯಕತೆ ಅವರಿಗಿಲ್ಲ ಎನಿಸಿರಬೇಕು. ಹಾಗಾಗಿ ನನ್ನಷ್ಟಕ್ಕೆ ನಾನಿದ್ದೇನೆ. ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಪಕ್ಷದವರನ್ನು ಭೇಟಿಯಾಗಿಲ್ಲ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಮುಂದಿನ ಒಂದು ಅವಧಿಗೆ ಚುನಾವಣೆಗೆ ನಿಲ್ಲಬೇಕೆಂದು ತೀರ್ಮಾನ ಮಾಡಿದ್ದೇನೆ. ಯಾವ ಪಕ್ಷದಲ್ಲಿ ನಿಲ್ಲಬೇಕೆಂಬುವುದನ್ನು ಆ ಸಂದರ್ಭದಲ್ಲಿ ನಿರ್ಧಾರ ಮಾಡುತ್ತೇನೆ. ಉಡುಪಿ ವಿಧಾನಸಭಾ ಕ್ಷೇತ್ರದ ಜನತೆ ಇಲ್ಲಿಯವರೆಗೂ ನನ್ನನ್ನು ಸೋಲಿಸಿಲ್ಲ. ಮೂರು ಬಾರಿ ನನ್ನನ್ನು ಗೆಲ್ಲಿಸಿದ್ದಾರೆ ಎಂದರು.