ಪುತ್ತೂರು: ಇರಾನ್ ಹಾಗೂ ಇಸ್ರೇಲ್ ದೇಶಗಳ ನಡುವೆ ಯುದ್ಧದ ವಾತವರಣವಿದ್ದರೂ ಇಸ್ರೇಲ್ನಲ್ಲಿರುವ ಅತ್ಯುತ್ತಮ ಸುರಕ್ಷತಾ ವ್ಯವಸ್ಥೆಯಿಂದ ನಾವು ಸುರಕ್ಷಿತರಾಗಿದ್ದೇವೆ ಎಂದು ಇಸ್ರೇಲಿನ ಟೆಲ್ಅವೀವ್ ಎಂಬಲ್ಲಿ ಉದ್ಯೋಗದಲ್ಲಿರುವ ಕನ್ನಡಿಗ ಹಿರೆಬಂಡಾಡಿ ಗ್ರಾಮದ ಕೆಮ್ಮಾರ ನಿವಾಸಿ ಪ್ರದೀಪ್ ಕೊಲ ತಿಳಿಸಿದ್ದಾರೆ.
ಕಳೆದ 2 ವರ್ಷದಿಂದ ಇಸ್ರೇಲಿನಲ್ಲಿ ಉದ್ಯೋಗದಲ್ಲಿರುವ ಅವರು ಇಲ್ಲಿ ಕೆಲವು ಸಲ ಯುದ್ಧ ನಡೆಯುತ್ತಿರುತ್ತದೆ. ಆದರೆ, ಈ ಬಾರಿ ಪರಿಸ್ಥಿತಿ ಸ್ವಲ್ಪ ಗಂಭೀರವಾಗಿದೆ. ಆದರೆ ರಾಯಭಾರಿ ಕಚೇರಿಯ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಿದರೆ ಅಪಾಯ ಇಲ್ಲ ಎಂದವರು ತಿಳಿಸಿದ್ದಾರೆ.
ಕಳೆದ ಶುಕ್ರವಾರದಿಂದ ಇಲ್ಲಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಸ್ತೆಗಳಲ್ಲಿ ಬಸ್ ಸಂಚಾರ ನಿರ್ಬಂಧಿಸಲಾಗಿದೆ. ಭಾನುವಾರ ಅಪರಾಹ್ನ 4 ಗಂಟೆ ಮತ್ತು 4.05ಕ್ಕೆ ಟೆಲ್ ಅವೀವ್ ಮೇಲೆ ಎರಡು ಮಿಸೈಲ್ ದಾಳಿಯಾಗಿದೆ. ಸೋಮವಾರ ಮುಂಜಾನೆಯೂ ಒಂದು ದಾಳಿಯಾಗಿದೆ ಎಂದವರು ಮಾಹಿತಿ ನೀಡಿದ್ದಾರೆ. ಇರಾನ್ ನಡೆಸುವ ಪ್ರತಿ ದಾಳಿಯನ್ನು ಇಲ್ಲಿ ಈಗ ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್ ಹಾಗೂ ತಾಡ್ ಎಂಬ ರಕ್ಷಣಾ ವ್ಯವಸ್ಥೆಗಳಿದ್ದು, ಇರಾನ್ ನಡೆಸುವ ಕ್ಷಿಪಣಿ ದಾಳಿಯನ್ನು ಹಿಮ್ಮೆಟ್ಟಿಸುತ್ತಿವೆ. ಅಲ್ಲದೇ, ರಸ್ತೆಗಳಲ್ಲಿ ಇಲ್ಲಿನ ಭದ್ರತಾ ಕಾರ್ಯಪಡೆಯವರು ಗಸ್ತು ತಿರುಗುತ್ತಲೇ ಇದ್ದಾರೆ. ಇಲ್ಲಿನ ಜನರು ಅಷ್ಟೇ ನಾವು ಭಾರತೀಯರು ಎಂದು ನಮ್ಮನ್ನು ಕಡೆಗಣಿಸುವುದಿಲ್ಲ. ನಾವು ಸುಲಭದಲ್ಲಿ ಸಿಗುವ ಯಾವ ಬಂಕರ್ಗೆ ಹೋದರೂ ಅದರೊಳಗೆ ಕುಳಿತುಕೊಳ್ಳಬಹುದಾಗಿದೆ. ಅವರು ಕೂಡಾ ನಮ್ಮ ಜಾಗರೂಕತೆಯ ಬಗ್ಗೆ ಅವರಷ್ಟೇ ಕಾಳಜಿ ತೋರುತ್ತಾರೆ. ಹಾಗಾಗಿ ಸುರಕ್ಷಿತ ಹಾಗೂ ನೆಮ್ಮದಿಯಿಂದ ಇದ್ದೇವೆ.
ಹೋಮ್ ಫ್ರಂಟ್ ಕಮಾಂಡೋ:
ಇಲ್ಲಿ ಹೋಮ್ ಫ್ರಂಟ್ ಕಮಾಂಡೋ ಎಂಬ ರಕ್ಷಣಾ ವ್ಯವಸ್ಥೆ ಇದೆ. ಇದರ ಮೊಬೈಲ್ ಅಪ್ಲಿಕೇಷನ್ ನಾವು ಡೌನ್ಲೋಡು ಮಾಡಿಕೊಳ್ಳಬೇಕು. ದಾಳಿಯ ಸೂಚನೆ ದೊರೆತಾಗ ಇದರಲ್ಲಿ ಎಚ್ಚರಿಕೆ ಸಂದೇಶ ಬರುತ್ತದೆ. ಮಿಸೈಲ್ ಯಾವ ಕಡೆಗೆ ಬರುತ್ತದೆ. ಅದು ತಲುಪುವ ಸಮಯವನ್ನೂ ಈ ಮೊಬೈಲ್ ಅಪ್ಲಿಕೇಷನ್ ನಮಗೆ ಮಾಹಿತಿ ನೀಡುತ್ತದೆ. ನೆಟ್ವರ್ಕ್ ಇಲ್ಲದಿದ್ದರೂ ಅಲರ್ಟ್ ಸಂದೇಶ ಬರುತ್ತದೆ. ಈ ಸಂದರ್ಭ ನಾವೆಲ್ಲಾ ಬಂಕರ್ಗಳಲ್ಲಿ ಆಶ್ರಯ ಪಡೆಯುತ್ತೇವೆ. ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿಯೂ ಬಂಕರ್ ವ್ಯವಸ್ಥೆಗಳಿವೆ. ಇದರಲ್ಲಿ ಸುಮಾರು 700 ಜನ ನಿಲ್ಲಬಹುದಾಗಿದೆ. ಒಳಗೆ ನೀರಿನ ವ್ಯವಸ್ಥೆ, ವಿದ್ಯುತ್ ಹಾಗೂ ಎಸಿ ವ್ಯವಸ್ಥೆ ಇದೆ ಎಂದವರು ತಿಳಿಸಿದ್ದಾರೆ.