ಶ್ರೀರಂಗಪಟ್ಟಣ: ಅನೈತಿಕ ಸಂಬಂಧ ಹೊಂದಿದ್ದರ ಶಂಕೆ ಹಿನ್ನೆಲೆ ಅನುಮಾನಗೊಂಡು ಪತ್ನಿಯನ್ನು ಪತಿಯೇ ಹತ್ಯೆಗೈದು ಶವವನ್ನು ಕಾವೇರಿ ನದಿಗೆ ಎಸೆದಿರುವ ಪ್ರಕರಣ ತಾಲ್ಲೂಕಿನ ಅರಕೆರೆ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಮಂಡ್ಯಕೊಪ್ಪಲು ಗ್ರಾಮದ ಪೂಜಾ(26) ಕೊಲೆಯಾಗಿರುವ ಮಹಿಳೆ. ಆಕೆಯ ಪತಿ ಶ್ರೀನಾಥ್(33) ಮನೆಯಲ್ಲಿ ವೇಲ್ನಿಂದ ಬಿಗಿದು ಹತ್ಯೆಗೈದು ಬಳಿಕ ಮಹದೇವಪುರ ಬಳಿಯ ಕಾವೇರಿ ನದಿಗೆ ಶವವನ್ನು ಎಸೆದಿದ್ದಾನೆ. ಘಟನೆಯ ಮೂರು ದಿನಗಳ ಬಳಿಕ ಆತನೇ ಠಾಣೆಗೆ ಆಗಮಿಸಿ ಶರಣಾಗಿದ್ದು, ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ. ಮೃತ ಮಹಿಳೆಯ ಶವವು ಕಾವೇರಿ ನದಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮುಳುವಾದ ಟಿಕ್ಟಾಕ್ ಗೀಳು ಕೊಲೆಯಾದ ಪೂಜಾಳಿಗೆ ಅತಿಯಾದ ಮೊಬೈಲ್ ಹುಚ್ಚು ಇದ್ದು, ಟಿಕ್ಟಾಕ್ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಳು. ಜೊತೆಗೆ ಅತಿಯಾದ ಮೊಬೈಲ್ ಕರೆಗಳು ಬರುತ್ತಿದ್ದವು ಎನ್ನಲಾಗಿದೆ. ಇದರಿಂದ ಅನುಮಾನಗಡಿದ್ದ ಪತಿ ಶ್ರೀನಾಥ್ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ ಹತ್ಯೆಗೈದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಶವ ಸಾಗಿಸಲು ಪೂಜಾಳ ತಂದೆಯೇ ಅಳಿಯನಿಗೆ ಸಾಥ್
ಮಗಳ ಶವ ಸಾಗಿಸಲು ಅಳಿಯನಿಗೆ ಸ್ವತಃ ಪೂಜಾಳ ತಂದೆಯೇ ಕೈಜೋಡಿಸಿರುವ ಬಗ್ಗೆಯೂ ಠಾಣೆಯಲ್ಲಿ ತಪ್ಪೊಪ್ಪಿಕೊಳ್ಳಲಾಗಿದೆ.
ಮನೆಯಿಂದ ಶವವನ್ನು ಸಾಗಿಸಲು ಪೂಜಾಳ ತಂದೆ ಶೇಖರ್ ಸಾಥ್ ನೀಡಿದ್ದು, ಬೈಕ್ನಲ್ಲಿ ಶವವನ್ನು ಸಾಗಿಸಿ ಶವ ನೀರಿನಲ್ಲಿ ತೇಲದಿರಲಿ ಎಂದು ದೇಹಕ್ಕೆ ಕಲ್ಲು ಕಟ್ಟಿ ಕಾವೇರಿ ನದಿಯಲ್ಲಿ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದೀಗ ಪತಿ ಶ್ರೀನಾಥ್ ಹಾಗೂ ಮಾವ ಶೇಖರ್ ಪೊಲೀಸರ ಅತಿಥಿಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.