ಅಧಿವೇಶನದಲ್ಲಿ ಕರಾವಳಿ ಅಭಿವೃದ್ಧಿಗೆ ಒಕ್ಕೊರಲಿನಿಂದ ಆಗ್ರಹಿಸಿದ ಬಿಜೆಪಿ ಶಾಸಕರು

0
15

ತುಳು ಭಾಷೆ ಅಧಿಕೃತ ಭಾಷೆ ಘೋಷಣೆಯ ವರದಿಯನ್ನು ಕ್ಯಾಬಿನೆಟ್‌ಗೆ ತನ್ನಿ

ಕರಾವಳಿ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಕನಿಷ್ಠ ಒಂದು ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಬೇಕೆಂದು ಅಧಿವೇಶನದಲ್ಲಿ ಹಿರಿಯ ಶಾಸಕ ಸುನಿಲ್ ಕುಮಾರ್ ನೇತೃತ್ವದ ಬಿಜೆಪಿ ಶಾಸಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಅಭಿವೃದ್ಧಿ ಚರ್ಚೆಯನ್ನು ಆರಂಭಿಸಿದ ಕಾರ್ಕಳದ ಶಾಸಕ ಸುನಿಲ್ ಕುಮಾರ್, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅನಂತ ಅವಕಾಶಗಳಿದ್ದರೂ ಅಗಾಧ ಪ್ರಮಾಣದಲ್ಲಿ ಅನ್ಯಾಯಕ್ಕೊಳಗಾಗಿದೆ. ಅಧಿವೇಶನಗಳಲ್ಲಿ ರಾಜ್ಯದ ನಾನಾ ಭಾಗಗಳ ವಿಚಾರಗಳಿಗೆ ಸಿಗುವ ಮನ್ನಣೆ, ಕರಾವಳಿ ಭಾಗಕ್ಕೆ ಸಿಗುವುದೇ ಇಲ್ಲ. ಈ ಭಾಗವು ಹೊಟೇಲ್, ದೇವಾಲಯ ಮತ್ತು ಖಾಸಗಿ ಬಸ್‌ಗಳ ನಿರ್ವಹಣೆಗೆ ಪ್ರಸಿದ್ದಿಯಾಗಿದ್ದು ಪ್ರವಾಸೋದ್ಯಮದ ತಾಣವೂ ಆಗಿದೆ. ಬೆಂಗಳೂರಲ್ಲಿ ಕುಳಿತು ಕರಾವಳಿ ಜಿಲ್ಲೆಯ ಕಟ್ಟಡಗಳ ಬಗ್ಗೆ ಅವೈಜ್ಞಾನಿಕವಾಗಿ ವಿನ್ಯಾಸಗೊಳಿಸುವ ಬದಲು ಖುದ್ದು ಸ್ಥಳ ವೀಕ್ಷಣೆ ನಡೆಸಿ ಅಗತ್ಯಕ್ಕೆ ತಕ್ಕಂತೆ ಕಟ್ಟಡಗಳ ವಿನ್ಯಾಸಗೊಳಿಸಬೇಕು. ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಕನಿಷ್ಠ ಒಂದು ಸಾವಿರ ಕೋಟಿ ರೂ. ಪ್ಯಾಕೇಜ್ ಅನ್ನು ಸರ್ಕಾರ ಘೋಷಣೆ ಮಾಡಬೇಕು ಎಂದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ವೇದವ್ಯಾಸ ಕಾಮತ್, ತುಳು ಭಾಷೆಯನ್ನು ಅಧಿಕೃತ ಭಾಷೆ ಎಂಬುದಾಗಿ ಘೋಷಣೆ ಮಾಡಲು ಮೋಹನ್ ಆಳ್ವ ವರದಿಯನ್ನು ಕ್ಯಾಬಿನೆಟ್ ಗೆ ತರುವಂತೆ ಒತ್ತಾಯಿಸಿದರು. ಬಂಟ ನಿಗಮ-ನಾರಾಯಣ ಗುರು ನಿಗಮಕ್ಕೆ ಸರ್ಕಾರ ಈ ವರೆಗೆ ಬಿಡಿಗಾಸೂ ನೀಡಿಲ್ಲ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಅನುದಾನ ನೀಡುವಂತೆ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೂ ಅನುದಾನ ಒದಗಿಸಬೇಕು. ಸಿಆರ್‌ಜೆಡ್ ವಲಯದಲ್ಲಿ ಮರಳು ತೆಗೆಯಲು ಅವಕಾಶ ಇಲ್ಲದೆ ಕಟ್ಟಡಗಳ ನಿರ್ಮಾಣವಾಗುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಬಿಜೆಪಿ ಶಾಸಕರುಗಳಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೂಡ್ಗಿ, ಗುರುರಾಜ್ ಗಂಟಿಹೊಳಿ, ದಿನಕರ್‌ಶೆಟ್ಟಿ, ಭಾಗೀರಥಿ ಮುರುಳ್ಯ ಮಾತನಾಡಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿ ಅನುದಾನ ಒದಗಿಸಬೇಕು, ಕಂಬಳಕ್ಕೆ ಐದು ಲಕ್ಷ ರು ನೀಡಬೇಕು, ಉದ್ಯೋಗ ಸೃಷ್ಟಿಗೆ ಒತ್ತು, ಸ್ಥಳೀಯ ಭಾಷೆಯ ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ನಿಯೋಜಿಸಬೇಕು, ಡಗ್ಸ್ ಹಾವಳಿ ಮಟ್ಟ ಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು, ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು, ಅಡಿಕೆ ಬೆಳೆಗಾರರ ಸಮಸ್ಯೆ ಎಂಬ ಇತ್ಯಾದಿ ವಿಷಯಗಳನ್ನು ಸರ್ಕಾರದ ಗಮನಕ್ಕೆ ತಂದರು.

Previous articleಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ: ಒಂದು ಪಂಗಡಕ್ಕೆ ಮಣೆ ಹಾಕುವುದು ಸರಿಯಲ್ಲ
Next articleರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಪಡೆದ ರಾಜ್ಯ ಸರ್ಕಾರ