ಅಕ್ರಮ ಶಸ್ತ್ರಾಸ್ತ್ರ, ಗಾಂಜಾ ಸಹಿತ 5 ಜನರ ಬಂಧನ

0
30

ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಕಳೆದ ೨೪ ಗಂಟೆಗಳ ಅವಧಿಯಲ್ಲಿ ನಡೆಸಿದ ೩ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತು ಹಾಗೂ ಅಕ್ರಮ ಪಿಸ್ತೂಲ್ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ-ಕರ್ನಾಟಕದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ೫ ಮಂದಿ ಅಂತಾರಾಜ್ಯ ಕ್ರಿಮಿನಲ್‌ಗಳನ್ನು ಬಂಧಿಸಿ ೩ ಪಿಸ್ತೂಲ್ ಮತ್ತು ೩ ಕಾರುಗಳು, ೬ ಸಜೀವ ಮದ್ದು ಗುಂಡುಗಳು ಹಾಗೂ ೧೨.೮೯೫ ಕೆಜಿ ಗಾಂಜಾ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಗುರುವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬುಧವಾರ ಮತ್ತು ಗುರುವಾರ ನಾಟೆಕಲ್, ತಲಪಾಡಿ, ಅರ್ಕುಳದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿತರ ಪೈಕಿ ಒಬ್ಬಾತನಿಗೆ ನಿಷೇಧಿತ ಪಿಎಫ್‌ಐ ಸಂಘಟನೆಯ ಜೊತೆ ನಂಟು ಇದೆ ಎಂಬ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ದೇರಳಕಟ್ಟೆ ಸಮೀಪದ ನಾಟೆಕಲ್ ಬಳಿ ಸ್ಕಾರ್ಪಿಯೋ ಕಾರೊಂದು ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಾ. ೧೨ರಂದು ದಾಳಿ ನಡೆಸಿ ಕಾರಿನಲ್ಲಿದ್ದ ಕಾಸರಗೋಡು ಜಿಲ್ಲೆಯ ಕಕ್ಕಾಡಿನಗತ್ ಮನೆಯ ನೌಫಲ್(೩೮), ಪೈವಳಿಕೆ ಗ್ರಾಮದ ಮನ್ಸೂರ್(೩೬) ಎಂಬವರನ್ನು ಬಂಧಿಸಿ ೨ ಪಿಸ್ತೂಲ್‌ಗಳು, ೪ ಸಜೀವ ಮದ್ದುಗುಂಡುಗಳು, ೨ ಮೊಬೈಲ್ ಪೋನುಗಳು, ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ ೧೪,೬೦,೦೦೦ ರೂ. ಆಗಿದೆ. ಈ ಬಗ್ಗೆ ಕೊಣಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೌಫಲ್ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟ/ಮಾರಾಟಕ್ಕೆ ಸಂಬಂಧಿಸಿದಂತೆ ೬ ಪ್ರಕರಣಗಳು ದಾಖಲಾಗಿದೆ. ಮನ್ಸೂರ್ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಹಾಗೂ ಜೀವ ಬೆದರಿಕೆ ಹಾಕಿದ ಘಟನೆ ಸಹಿತ ೪ ಪ್ರಕರಣ ದಾಖಲಾಗಿದೆ.
ಕೇರಳದಿಂದ ಮಂಗಳೂರಿಗೆ ಗಾಂಜಾ ಮಾರಾಟ ಮಾಡಲು ಕಾರೊಂದರಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಾ. ೧೨ರಂದು ನಗರ ಹೊರವಲಯದ ಅರ್ಕುಳದಲ್ಲಿ ಕಾರನ್ನು ಪತ್ತೆ ಹಚ್ಚಿ ಆರೋಪಿ ಮೂಲತಃ ಕಾಸರಗೋಡು ಜಿಲ್ಲೆಯ ಬಂದ್ಯೋಡ್‌ನ ಪ್ರಸಕ್ತ ಕೋಝಿಕ್ಕೋಡ್‌ನಲ್ಲಿ ವಾಸವಾಗಿದ್ದ ಅಬ್ದುಲ್ ಲತೀಫ್ ಯಾನೆ ತೋಕು ಲತೀಶ್(೨೯) ಎಂಬಾತನನ್ನು ಬಂಧಿಸಿದರು. ಆರೋಪಿಯಿಂದ ಸ್ವಿಫ್ಟ್ ಕಾರು, ೧೨.೮೯೫ ಕೆಜಿ ಗಾಂಜಾ, ಮೊಬೈಲ್ ಫೋನ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ೧೫,೭೦.೦೦೦ ಲಕ್ಷ ರೂ. ಆಗಬಹುದು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಆರೋಪಿ ಅಬ್ದುಲ್ ಲತೀಫ್ ಎಂಬಾತನ ವಿರುದ್ಧ ಇತ್ತೀಚೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗೆ ಪಿಸ್ತೂಲ್ ನೀಡಿದ ಆರೋಪವಿದೆ. ೨೦೨೪ರಲ್ಲಿ ಉಳ್ಳಾಲದಲ್ಲಿ ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪಿ ಅಸ್ಟರ್ ಎಂಬಾತ ನಿಗೂ ಈತನು ಪಿಸ್ತೂಲ್ ಮಾರಾಟ ಮಾಡಿದ್ದ ಆರೋಪವಿದೆ. ಈ ಪ್ರಕರಣಗಳಲ್ಲಿ ಈತನು ತಲೆಮರೆಸಿ ಕೊಂಡಿದ್ದನು. ಈತನ ವಿರುದ್ಧ ಈ ಹಿಂದೆ ಕೇರಳ ಹಾಗೂ ಕರ್ನಾಟಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಹಲ್ಲೆ, ದರೋಡೆ, ಕೊಲೆಯತ್ನ, ಕೊಲೆ ಕೃತ್ಯ ಸಹಿತ ೧೩ ಪ್ರಕರಣಗಳು ದಾಖಲಾಗಿದೆ.
ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿ ಪರಿಸರದಲ್ಲಿ ಮಹಾರಾಷ್ಟ್ರ ನೋಂದಣಿ ಸಂಖ್ಯೆಯ ಕಾರಿನಲ್ಲಿ ಇಬ್ಬರು ಯಾವುದೋ ಕೃತ್ಯವೆಸಗಲು ಸಂಚು ರೂಪಿಸಿ ತಿರುಗಾಡಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ತಲಪಾಡಿ ದೇವಿಪುರದ ಬಳಿ ಕಾರನ್ನು ಪತ್ತೆ ಹಚ್ಚಿ ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಮೊರ್ತಾನ ಮನೆಯ ಅಸ್ಗರ್(೨೭) ಹಾಗೂ ಸಾಲಿ(೩೧) ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ೧ ಪಿಸ್ತೂಲ್, ೨ ಸಜೀವ ಮದ್ದುಗುಂಡುಗಳು, ೨ ಮೊಬೈಲ್ ಫೋನುಗಳು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಅಂದಾಜು ಮೌಲ್ಯ ೧೦,೨೦,೦೦೦ ಲಕ್ಷ ರೂ. ಆಗಬಹುದು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಅಸ್ಗರ್ ಎಂಬಾತನ ವಿರುದ್ಧ ಹಲ್ಲೆ, ದರೋಡೆ, ಕೊಲೆ ಯತ್ನ ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ ಹಾಗೂ ಕರ್ನಾಟಕದಲ್ಲಿ ೧೭ ಪ್ರಕರಣಗಳು ದಾಖಲಾಗಿದೆ. ಸಾಲಿ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ, ಹಲ್ಲೆ, ಕೊಲೆ ಯತ್ನ, ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ ೧೦ ಪ್ರಕರಣಗಳು ದಾಖಲಾಗಿದೆ.
ಒಟ್ಟಿನಲ್ಲಿ ೩ ಪ್ರಕರಣಗಳಲ್ಲಿ ೩ ಪಿಸ್ತೂಲ್‌ಗಳು, ೬ ಸಜೀವ ಮದ್ದುಗುಂಡುಗಳು, ೧೨.೮೯೫ ಕೆಜಿ ಗಾಂಜಾ, ೫ ಮೊಬೈಲ್ ಫೋನುಗಳು ಹಾಗೂ ೩ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ೪೦,೫೦,೦೦೦ ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರಕರಣಗಳಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Previous articleಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯಿಂದಲೇ ವ್ಯಕ್ತಿ ಕೊಲೆ
Next articleವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ