ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು 2 ವರ್ಷದ ಮಗು ಸಾವು

ಕಾರವಾರ: ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನಲ್ಲಿ ನಡೆದಿದೆ.
ಅಂಕೋಲಾ ತಾಲೂಕಿನ ಡೊಂಗ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳವಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2) ಮೃತಪಟ್ಟ ಬಾಲಕಿ. ತಂದೆ ಶ್ರೀಕಾಂತ್ ಹೆಬ್ಬಾರ್ ಅವರೊಂದಿಗೆ ದನದ ಕೊಟ್ಟಿಗೆ ಬಳಿ ತೆರಳಿದ್ದ ಸಾದ್ವಿ, ಕೊಟ್ಟಿಗೆ ಕೆಲಸದಲ್ಲಿ ತಂದೆ ಮಗ್ನರಾಗಿದ್ದಾಗ ಆಕಸ್ಮಿಕವಾಗಿ ಗೊಬ್ಬರದ ಗುಂಡಿಗೆ ಬಿದ್ದಿದ್ದಾಳೆ.
ಕೆಲಸದಲ್ಲಿ ನಿರತರಾಗಿದ್ದ ಶ್ರೀಕಾಂತ್ ಅವರು ಮಗಳ ಚಲನವಲನ ಗಮನಿಸಿಲ್ಲ. ಕೆಲ ಸಮಯದ ಬಳಿಕ ಮಗುವಿನ ಸದ್ದು ಕೇಳದಿದ್ದಾಗ ಹುಡುಕಾಟ ನಡೆಸಿದಾಗ, ಸಾದ್ವಿ ಗೊಬ್ಬರದ ಗುಂಡಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.