ಶಿವಮೊಗ್ಗ: ಜಲಾಶಯದ ಹಿನ್ನೀರಿನಲ್ಲಿ ಸೋಮವಾರ ಸಂಜೆ 8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಆ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಸಾಗರ ಅರಣ್ಯ ವಿಭಾಗದ ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ಸೋಮವಾರ ಸಂಜೆ 8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವ ಸಚಿವರು, ಹುಲಿಗೆ ಗುಂಡು ಹೊಡೆದ ಗಾಯವೂ ಇರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು ಈ ಬಗ್ಗೆ ತನಿಖೆ ನಡೆಸಿ 10 ದಿನಗಳ ಒಳಗಾಗಿ ವಾಸ್ತವ ವರದಿ ಸಲ್ಲಿಸಲು ತಿಳಿಸಿದ್ದಾರೆ.
ಹುಲಿಯ ಮೃತ ದೇಹ ಪತ್ತೆಯಾಗಿರುವ ಪ್ರದೇಶದಲ್ಲಿ ಯಾವತ್ತೂ ಹುಲಿಯ ದರ್ಶನವೇ ಆಗಿರಲಿಲ್ಲ. ಹೀಗಾಗಿ ಬೇರೆ ಕಡೆ ಹುಲಿ ಕೊಂದು ಇಲ್ಲಿ ಹಾಕಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಈ ಬಗ್ಗೆಯೂ ತನಿಖೆ ನಡೆಸಲು ಸೂಚಿಸಿದ್ದಾರೆ.























