Home Advertisement
Home ತಾಜಾ ಸುದ್ದಿ ಗೃಹಲಕ್ಷ್ಮೀ ಯೋಜನೆ ಅರ್ಜಿಗೆ ದುಡ್ಡು ಕೊಡಬೇಡಿ

ಗೃಹಲಕ್ಷ್ಮೀ ಯೋಜನೆ ಅರ್ಜಿಗೆ ದುಡ್ಡು ಕೊಡಬೇಡಿ

0
137

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಯಾರೂ ದುಡ್ಡು ಕೊಡಬಾರದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೇಳಿಕೊಂಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯನ್ನು ಒಂದು ರೂ. ಕೂಡ ಖರ್ಚಿಲ್ಲದೆ ಮಹಿಳೆಯರಿಗೆ ತಲುಪಿಸಿ 2000 ರೂ. ನೀಡಬೇಕು ಎಂಬುದು ನಮ್ಮ ಸರಕಾರದ ಉದ್ದೇಶ. ಹಾಗಾಗಿ ಸೇವೆ ನೀಡುವ ಕೇಂದ್ರ ಮತ್ತು ವ್ಯಕ್ತಿಗಳಿಗೆ ಸರಕಾರವೇ ಸೇವಾ ಶುಲ್ಕ ಎಂದು ಒಂದು ಅರ್ಜಿಗೆ 20 ರೂ. ನೀಡಲು ನಿರ್ಧರಿಸಿದೆ. ಹಾಗಾಗಿ ಯಾರಾದರೂ ಬಂದು ಹಣ ಕೊಡಿ ಎಂದು ಕೇಳಿದರೆ ಕೊಡಬೇಡಿ ಎಂದು ವಿನಂತಿಸಿದರು.
ಕೆಲವು ಕಡೆ ಮಧ್ಯವರ್ತಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿದೆ. ಅಂತಹವರಿಗೆ ಅವಕಾಶ ಮಾಡಿಕೊಡಬಾರದು. ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಮಹಿಳೆಯರ ಖಾತೆಗೆ ಹಣ ತಲುಪಬೇಕು ಎನ್ನುವುದು ನಮ್ಮ ಉದ್ದೇಶ. ಇದಕ್ಕೆ ಯಾರೂ ಅವಕಾಶ ಕೊಡಬಾರದು. ಅರ್ಜಿ ಸಲ್ಲಿಸಲು ಯಾವುದೇ ಸಮಯ ಮಿತಿ ಇಲ್ಲದಿರುವುದರಿಂದ ಯಾವುದೇ ಅವಸರವಿಲ್ಲದೆ ನಿಧಾನವಾಗಿ ಅರ್ಜಿ ಹಾಕಲು ಅವಕಾಶ ನೀಡಲಾಗುವುದು. ಹಾಗಾಗಿ ಯಾರೂ ಹಣ ಕಳೆದುಕೊಳ್ಳಬಾರದು ಎಂದರು.