Home Advertisement
Home ನಮ್ಮ ಜಿಲ್ಲೆ ಈ ಬಾರಿ ಬಹುಮತ ಖಚಿತ: ಬಾಲಚಂದ್ರ ಜಾರಕಿಹೊಳಿ

ಈ ಬಾರಿ ಬಹುಮತ ಖಚಿತ: ಬಾಲಚಂದ್ರ ಜಾರಕಿಹೊಳಿ

0
113
balachandra

ಮೂಡಲಗಿ: ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಕಾರ್ಯಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಇಂದಿನಿಂದ ಪ್ರತಿ ಮತದಾರರ ಮನೆಮನೆಗೆ ತೆರಳಿ ವಿಜಯ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿ ಅರಭಾವಿ ಮಂಡಲ ಏರ್ಪಡಿಸಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನಿಂದ ಕಾರ್ಯಕರ್ತರು ತಮ್ಮೆಲ್ಲ ಕೆಲಸಗಳನ್ನು ಕೇವಲ ಪಕ್ಷಕ್ಕೆ ಮಾತ್ರ ಮೀಸಲಿಟ್ಟು, ಪಕ್ಷದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ವಿರೋಧ ಪಕ್ಷಗಳು ನಮ್ಮ ಪಕ್ಷದ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ ತಲೆಕೆಡಿಸಿಕೊಳ್ಳಬೇಡಿ. ಕಾರ್ಯಕರ್ತರು ಶ್ರಮ ವಹಿಸಿದಲ್ಲಿ ಖಂಡಿತವಾಗಿಯೂ ರಾಜ್ಯದಲ್ಲಿ ೧೨೦ ಸ್ಥಾನಗಳನ್ನು ಗಳಿಸಿ, ಸರಳ ಬಹುಮತವನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.