ದೆಹಲಿ: ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರಿಗೆ ಸಬ್ಸಿಡಿ ಕೊಡುವ ಅವಶ್ಯಕತೆ ಈಗ ಇಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಆ ಮೂಲಕ ಸರಕಾರದಿಂದ ಎಲೆಕ್ಟ್ರಿಕ್ ವಾಹನಗಳಿಗೆ ಸಿಗುತ್ತಿರುವ ಸಬ್ಸಿಡಿ ನಿಲ್ಲಿಸುವ ಮುನ್ಸೂಚನೆ ಕೊಟ್ಟಿದ್ದಾರೆ.
ದೆಹಲಿಯಲ್ಲಿ ಆಯೋಜಿಸಿದ್ದ ಬಿಎನ್ಇಎಫ್ ಸಮಿಟ್ನಲ್ಲಿ ಮಾತಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮೊದಲು ಇವಿ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆ ಇದ್ದದ್ದರಿಂದ ಉತ್ಪಾದನಾ ವೆಚ್ಚ ಬಹಳ ಇತ್ತು. ಹಾಗಾಗಿ ಸರಕಾರವೇ ಸಬ್ಸಿಡಿ ಕೊಡಲು ಮುಂದಾಯಿತು. ಆದರೆ ಈಗ ಜನರೇ ಸ್ವಯಂಕೃತವಾಗಿ ಇ.ವಿ.ವಾಹನಗಳತ್ತ ಹೊರಳುತ್ತಿದ್ದಾರೆ. ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಹಾಗಾಗಿ ಇನ್ನು ಮುಂದೆ ಇ.ವಿ.ವಾಹನಗಳ ಉತ್ಪಾದನೆಗೆ ಸಬ್ಸಿಡಿ ಕೊಡುವ ಅವಶ್ಯಕತೆ ಇಲ್ಲ ಎಂದು ತೋರುತ್ತದೆ ಅಂತ ಗಡ್ಕರಿ ಹೇಳಿದ್ದಾರೆ.