ಸುವರ್ಣ ವಿಧಾನಸೌಧ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ

0
8

ಬೆಳಗಾವಿ: “ವಸುದೈವ ಕುಟುಂಬಕಂ” ಘೋಷವಾಕ್ಯದೊಂದಿಗೆ ನಡೆದ ಅಂತರರಾಷ್ಟ್ರೀಯ ಒಂಭತ್ತನೇ ಯೋಗ ದಿನಾಚರಣೆ ಅಂಗವಾಗಿ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಎದರು ಸಾವಿರಾರು ಜನರಿಂದ ಯೋಗ ಪ್ರದರ್ಶನ ನಡೆಯಿತು.

ಬೆಳಗಿನಜಾವದಿಂದಲೇ ಸುವರ್ಣ ವಿಧಾನಸೌಧದ ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯೋಗಪಟುಗಳು ಹಾಗೂ ಗಣ್ಯರು ಸುಮಾರು 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗದ ಮಹತ್ವವನ್ನು ಸಾರಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಹಾಗೂ ಜಿಲ್ಲಾ ಆಯುಷ್ ಇಲಾಖೆ, ಮಹಾಋಷಿ ಯೋಗ ಹೆಲ್ತ್ ಫೌಂಡೇಷನ್ ಮತ್ತು ವಿವಿಧ ಯೋಗಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಜೂ.21) 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಎದರು ಏರ್ಪಡಿಸಲಾಗಿದ್ದ ಸಾಮೂಹಿಕ ಯೋಗಾಸನ ಕಾರ್ಯಕ್ರಮಕ್ಕೆ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಚಾಲನೆ ನೀಡಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರಾಜಸ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು, ಭಾರತದ ಋಷಿ ಪರಂಪರೆಯಾಗಿರುವ ಯೋಗ ವನ್ನು ಅಳವಡಿಸಿಕೊಂಡು ದೇಶದ ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು ಎಂಬುದು ಯೋಗ ದಿನಾಚರಣೆಯ ಆಶಯವಾಗಿದೆ ಎಂದು ಹೇಳಿದರು.

ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಹಾಗೂ ಪ್ರಧಾನಮಂತ್ರಿ ಮೋದಿಜಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೊಬರದ, ಜಿಪಂ ಅಧಿಕಾರಿ ರವಿ ಬಂಗಾರೆಪ್ಪನವರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ್ ಸುಣಧೋಳಿ, ತಹಶಿಲ್ದಾರ ಸಿದ್ದರಾಜ್ ಭೋಸಗಿ ಮತ್ತಿತರರು ಉಪಸ್ಥಿತರಿದ್ದರು.

ಧ್ಯಾನಕ್ಕೆ ಪೂರಕವಾಗಿರುವ ತಾಡಾಸನ; ಮನಸ್ಸು ಶಾಂತವಾಗಿಟ್ಟುಕೊಳ್ಳುವ ವೃಕ್ಷಾಸನ, ಪಾದ ಹಸ್ತಾಸನ; ಅರ್ಧಚಕ್ರಾಸನ; ದಂಡಾಸನ, ಭದ್ರಾಸನ, ವಜ್ರಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಶವಾಸನ, ಪ್ರಾಣಯಾಮ ಸೇರಿದಂತೆ ವಿವಿಧ ಆಸನಗಳನ್ನು ಸಾವಿರಾರು ಜನರು ಪ್ರದರ್ಶಿಸಿದರು.
ಇಂದಿರಾ ಜೋಶಿ ಹಾಗೂ ತಂಡದವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಯೋಗ ಸ್ಪರ್ಧೆಯಲ್ಲಿ 40 ಮೆಡಲ್, 30 ಟ್ರೋಫಿಗಳನ್ನು ಗಳಿಸಿರುವ ಜೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿ ಸತ್ಯಂ ಕಾಮ್ರೇಕರ್ ಮತ್ತು ಶಿಕ್ಷಕಿ ಪಲ್ಲವಿ ನಾಡಕರ್ಣಿ ನೇತೃತ್ವದಲ್ಲಿ ತರಬೇತಿ ಪಡೆದಿರುವ ಜೈನ್ ಹೆರಿಟೇಜ್ ಶಾಲೆಯ ಮಕ್ಕಳು ಕೂಡ ಯೋಗ ಪ್ರದರ್ಶನ ನೀಡಿದರು.
ರಾಷ್ಟ್ರಮಟ್ಟದ ಯೋಗ ಕಾರ್ಯಕ್ರಮಗಳನ್ನು ನೀಡಿರುವ ಲವ್ ಡೇಲ್ ಶಾಲೆಯ ನೀರಜ್ ಹಾಗೂ ನಕ್ಷತ್ರ ಅವರು ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆದರು.
ಕೊನೆಯಲ್ಲಿ ಎಸ್.ಬಿ.ಜಿ. ಆಯುಋವೇದಿಕ್ ಮಹಾವಿದ್ಯಾಲಯದ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಕೂಡ ವಿವಿಧ ಬಗೆಯ ಆಸನಗಳನ್ನು ಪ್ರದರ್ಶಿಸಿತು.
ಯೋಗಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ-ಕಾಲೇಜುಗಳ ಮಕ್ಕಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು.


Previous articleಕೆ.ಆರ್.ಎಸ್.ನಲ್ಲಿ ಬೃಹತ್ ಯೋಗ
Next articleಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತಾಯ