ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದವರು ಜನರನ್ನು ನರಕದಲ್ಲಿ ಇಟ್ಟಿದ್ದಕ್ಕೆ ಅವರನ್ನು ಜನ ಮನೆಗೆ ಕಳಿಸಿದ್ದಾರೆ. ಅದೊಂದು ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಣದೀಪಸಿಂಗ್ ಸುರ್ಜೇವಾಲಾಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ಮೊದಲು ಕಾಂಗ್ರೆಸ್ ಪಕ್ಷದಲ್ಲಿರುವ ಒಳಜಗಳ ಸರಿಪಡಿಸುವ ಕೆಲಸ ಮಾಡಲಿ. ಆ ಮೇಲೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.
70 ವರ್ಷದಲ್ಲಿ ಕಾಂಗ್ರೆಸ್ ನವರ ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಅವರಿಗೆ ಕಿವಿ ಮೇಲೆ ಹೂವು ಇನ್ನು ಮುಂದೆ ಫಿಕ್ಸ್ ಆಗಿರುತ್ತದೆ ಎಂದು ಹೇಳಿದರು.
ಗೃಹಿಣಿ ಲಕ್ಷ್ಮೀ ಯೋಜನೆ ಘೋಷಣೆ ಬಗ್ಗೆ ನಾನು ಹೇಳಿದ್ದೆ. ಅದನ್ನು ತಿಳಿದು ಕಾಂಗ್ರೆಸ್ ನವರು ಗೃಹಲಕ್ಷ್ಮಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ನನ್ನ ಯೋಜನೆಯನ್ನು ಅವರು ಕಾಪಿ ಮಾಡಿದ್ದಾರೆ ಎಂದು ಸಿಎಂ ಟೀಕಿಸಿದರು..
ಕಾಂಗ್ರೆಸ್ ಪಕ್ಷದಲ್ಲಿ ಅಸುರರ ಪಟ್ಟಿ ದೊಡ್ಡದಿದೆ. ಜನರಿಗೆ ಗೊತ್ತಿದೆ. ಅಸುರರು ಯಾರು, ದೇವತೆಗಳು ಯಾರು ಎಂಬುದು. ಅದಕ್ಕಾಗಿಯೇ ಕಾಂಗ್ರೆಸ್ ನ್ನು ಜನರು ಕಿತ್ತು ಹಾಕಿದ್ದಾರೆ ಎಂದು ಹೇಳಿದರು.
ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಶೀಘ್ರ ಅನುಷ್ಠಾನ ಮಾಡುತ್ತೇವೆ.
ಬಜೆಟ್ ಅನುಷ್ಠಾನಕ್ಕೆ ಹಿಂದಿನ ವರ್ಷ ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಿದ ಬಜೆಟ್ ಅನುಷ್ಠಾನ ಸಮಿತಿ ರೀತಿಯಲ್ಲೇ ಈ ಬಾರಿಯೂ ಸಮಿತಿ ರಚಿಸಿ ಸಮರ್ಪಕ ಅನುಷ್ಠಾನ ಮಾಡಲಾಗುವುದು ಎಂದು ಹೇಳಿದರು.