ಹುಬ್ಬಳ್ಳಿ: ೨೦೨೩ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿಯು ವಿನಯ್.ಸಿ ಅವರ ‘ಅಪ್ಪ ಚಪ್ಪಲಿ’ ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಹಿರಿಯ ಬರಹಗಾರರಾದ ಕುಮಾರ ಬೇಂದ್ರೆ ಮತ್ತು ಪ್ರಕಾಶ ಕಡಮೆ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಶ್ರೀಮತಿ ವಿಜಯಾಅಗಸನಕಟ್ಟೆ ಸಹಯೋಗದಲ್ಲಿ ನಡೆವ ಸತತ ಆರನೇ ವರ್ಷದ ಸ್ಪರ್ಧೆ ಇದಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಜೂನ್ ತಿಂಗಳಲ್ಲಿ ನೆರವೇರಿಸಲಾಗುವುದು ಎಂದು ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಥೆಗಾರನ ಪರಿಚಯ:
ಡಾ. ಪ್ರಹ್ಲಾದ್ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿ-೨೦೨೩ ಪಡೆದ ವಿನಯ್.ಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಚಿಕ್ಕನಹಳ್ಳಿ ಎಂಬಲ್ಲಿ ೧೯೯೬ ರಲ್ಲಿ ಜನಿಸಿದರು. ಇವರ ತಂದೆ ಚನ್ನ ಕೃಷ್ಣಪ್ಪ ಮತ್ತುತಾಯಿ ಹನುಮಕ್ಕ. ಇವರ ಕೆಲವು ಕಥೆ ಮತ್ತು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಿಜಯ ಕರ್ನಾಟಕ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನಿತರು. ಹಲವು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು ವಿವಿಯಲ್ಲೇ ಕನ್ನಡ ಎಂ.ಎ ಪದವಿ ಪಡೆದ ವಿನಯ್, ಪ್ರಸ್ತುತ ಅದೇ ಬೆಂಗಳೂರು ವಿಶ್ವವಿದ್ಯಾಲಯದಲ್ಲೇ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.