ಬೆಳಗಾವಿ: ಮಹೇಶ ಕುಮಠಳ್ಳಿಗೆ ಹಾಗೂ ಶ್ರೀಮಂತ ಪಾಟೀಲ ಸೇರಿದಂತೆ ಬಿಜೆಪಿ ಸೇರಿದ ಎಲ್ಲರಿಗೂ ಟಿಕೆಟ್ ಸಿಗಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಮಹಾರಾಷ್ಟ್ರದ ಶಿನ್ನೊಳ್ಳಿ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಲು ಬರುವುದಿಲ್ಲ. ಈ ಹಿಂದೆ ಬಿಜೆಪಿ ಸೇರಿದ 17 ಶಾಸಕರಿಗೂ ಬಿಜೆಪಿ ಹೈಕಮಾಂಡ್ ಆಶೀರ್ವಾದ ನೀಡಲಿದೆ ಎಂದರು.
ಸೋಲು-ಗೆಲುವು ದೇವರ ಇಚ್ಛೆ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹತಾಶೆ ಆಗ್ತಿರೋದಕ್ಕೆ ಕಾರಣ ಏನೆಂದು ಗೊತ್ತಾಗುತ್ತಿಲ್ಲ, ನಮಗೆ ವರಿಷ್ಠರಿದ್ದಾರೆ. ಅವರ ಮುಂದೆ ನಾನು, ಲಕ್ಷ್ಮಣ ಸವದಿ ಯಾವ ಗಿಡದ ತಪ್ಪಲು ಎಂದ ಅವರು, ನಮ್ಮ ರಾಷ್ಟ್ರೀಯ ನಾಯಕರು ಹೆಮ್ಮರವಾಗಿದ್ದಾರೆ. ಅವರು ಎಲ್ಲಾ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಯಾಕಿಷ್ಟೊಂದು ಚಡಪಡಿಸುತ್ತಿದ್ದೀಯಾ? ಅರಾಮಾಗಿರು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಟಾಂಗ್ ಕೊಟ್ಟರು.